ಕಾರವಾರ: ಹಿಂದಿನ ಸರ್ಕಾರದಲ್ಲಿ ಜಾರಿಯಾದ ಸಾಗರಮಾಲ ಯೋಜನೆಯ ವಿರುದ್ಧ ಅಂದು ಧ್ವನಿ ಎತ್ತದೇ ಜನರಿಗೆ ತಪ್ಪು ಮಾಹಿತಿ ನೀಡಿ, ತಮ್ಮ ವಿರುದ್ಧ ಪ್ರತಿಭಟನೆ ಮಾಡಿದವರು ಇದೀಗ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸತ್ಯ ಮರೆಮಾಚುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯ್ಕ್ ಸಚಿವರ ಎದುರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಾರವಾರದಲ್ಲಿ ಶನಿವಾರ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ಅಭಿವೃದ್ಧಿ ಕುರಿತ ಮೀನುಗಾರರು ಹಾಗೂ ಸಾರ್ವಜನಿಕರ ಅಹವಾಲು ಸಭೆಯ ನಡುವೆ ವಿಷಯ ಪ್ರಸ್ತಾಪಿಸಿದ ಶಾಸಕಿ ರೂಪಾಲಿ ನಾಯ್ಕ್, ಸಾಗರಮಾಲ ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಈ ಹಿಂದಿನ ಶಾಸಕರು ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದರು. ಅಂದು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಬಳಿಕ ನನ್ನ ವಿರುದ್ಧ ಮೀನುಗಾರರಿಗೆ ತಪ್ಪು ಮಾಹಿತಿ ನೀಡಿ ಸಾಗರಮಾಲ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.
ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಹಾಗೂ ನನ್ನ ಫೋಟೊಗೆ ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದಿರಿ. ಯೋಜನೆಯ ಬಗ್ಗೆ ಆರಂಭದಲ್ಲಿಯೇ ವಿರೋಧ ಮಾಡದವರು ನಿಮ್ಮಲ್ಲಿಯೇ ಕೆಲವರಿದ್ದಾರೆ. ಆಗ ಯಾಕೆ ಪ್ರತಿಭಟನೆ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು.
ಹಿಂದಿನ ಶಾಸಕರನ್ನು ಕೇಳಬೇಕಿದ್ದವರು ಇದೀಗ ಯಾಕೆ ಕೇಳುತ್ತೀರಾ? ಇದರ ಬದಲು ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಳಬಹುದಿತ್ತು. ನಾನು ಬಂದು ಮೂರು ವರ್ಷದಲ್ಲಿ ತಂದಷ್ಟು ಅನುದಾನವನ್ನು ಯಾರೂ ತಂದಿಲ್ಲ. ನಾನು ಈಗಲೂ ಕೂಡ ಬಂದರು ಬೇಡ ಎಂದು ಹೇಳುತ್ತಿದ್ದೇನೆ. ಕೆಲ ಮೀನುಗಾರ ಮುಖಂಡರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಮಗೆ ಈ ಯೋಜನೆ ಜಾರಿ ಮಾಡಿ ನಮ್ಮ ಜನರ ವಿರೋಧ ಕಟ್ಟಿಕೊಳ್ಳಬೇಕಾಗಿಲ್ಲ. ಆದರೆ, ನಮ್ಮ ನಡುವೆ ನಡೆದ ಸಭೆಯ ವಿಷಯಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಇದೇ ಕಾರಣಕ್ಕೆ ಸಚಿವರನ್ನು ಕರೆಸಿಕೊಂಡು ಎಲ್ಲರ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತಿದೆ ಎಂದರು.
ಮೂರು ವರ್ಷದ ಹಿಂದೆಯೇ ವಿರೋಧ ಮಾಡಿದ್ದರೇ ಯೋಜನೆ ವಾಪಸ್ ಆಗುತ್ತಿತ್ತು. ಸದ್ಯ ಈ ವಿಷಯ ನ್ಯಾಯಾಲಯದಲ್ಲಿದೆ. ಎಲ್ಲರೂ ಬೀಚ್ ಉಳಿಸಿಕೊಳ್ಳಬೇಕಾಗಿದೆ. ಮೀನುಗಾರರು ರಾಜಕೀಯ ದಾಳಕ್ಕೆ ಕುಣಿಯಬಾರದು. ನನಗೂ ರಾಜಕೀಯ ಮಾಡಲು ಬರುತ್ತದೆ. ನಾನು ಅಂತಹ ಕೆಲಸ ಮಾಡುವುದಿಲ್ಲ. ಮೀನುಗಾರರು ಇನ್ನೊಬ್ಬರ ಮಾತು ಕೇಳಿ ತಪ್ಪು ದಾರಿಗೆ ಇಳಿಯಬಾರದು ಎಂದು ತಮ್ಮ ವಿರೋಧಿಗಳ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಕಿಂಗ್ ಮೇಕರ್ ಆಗುವ ಆಸೆ ಇಲ್ಲ, ಯಾವುದೇ ಷರತ್ತಿನೊಂದಿಗೆ ಜೆಡಿಎಸ್ ಸೇರುತ್ತಿಲ್ಲ: ಸಿ.ಎಂ. ಇಬ್ರಾಹಿಂ