ಶಿರಸಿ(ಉತ್ತರ ಕನ್ನಡ): ಕನ್ನಡದ ಪ್ರಥಮ ರಾಜಧಾನಿ ಎಂಬ ಹೆಗ್ಗಳಿಕೆಯೊಂದಿಗೆ ರಾಜ್ಯದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದೆನಿಸಿರುವ ಶಿರಸಿ ತಾಲೂಕಿನ ಬನವಾಸಿ, ಪ್ರವಾಸಿ ತಾಣವಾಗಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ಸೊರಗಿದೆ.
ಬನವಾಸಿ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ವೇಗ ಪಡೆದುಕೊಂಡಿದ್ದರ ಜೊತೆಗೆ ಹಲವು ಸಮಸ್ಯೆಗಳೂ ಇಲ್ಲಿ ಜೀವಂತವಾಗಿದ್ದು, ಪ್ರತಿ ದಿವಸ ಬರುವ ನೂರಾರು ಪ್ರವಾಸಿಗರು ಸಮಸ್ಯೆ ಅನುಭವಿಸುವಂತಾಗಿದೆ.
![Lack of infrastructure in Banavasi](https://etvbharatimages.akamaized.net/etvbharat/prod-images/kn-srs-02-banavasi-pkg-ka10005_14102022152349_1410f_1665741229_245.jpg)
ಸೂಕ್ತ ವ್ಯವಸ್ಥೆಯಿಲ್ಲ: ಬನವಾಸಿ ಶಿರಸಿ ತಾಲೂಕಿನ ವ್ಯಾಪ್ತಿಗೆ ಒಳಪಟ್ಟರೂ ಸಹ ಅದು ಯಲ್ಲಾಪುರ-ಮುಂಡಗೋಡ ವಿಧಾನಸಭಾ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಬನವಾಸಿ ಪ್ರತ್ಯೇಕ ಪಂಚಾಯಿತಿ ಇದೆ. ಬನವಾಸಿ ಮತ್ತು ಕಡಗೋಡ ಎಂಬ ಎರಡು ಗ್ರಾಮವಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ 8,500 ರಷ್ಟಿದೆ. ಬನವಾಸಿಯಲ್ಲಿ ಉಮಾ ಮಧುಕೇಶ್ವರ ದೇವಸ್ಥಾನ, ಪಂಪ ವನ, ವರದಾ ನದಿ ಪಾತ್ರ ಹೀಗೆ ಹಲವು ಪ್ರವಾಸಿ ತಾಣಗಳಿದೆ. ಅದರಲ್ಲಿ ದೇವಸ್ಥಾನಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.
ಆದರೆ, ಉತ್ತಮ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಹೊರತಾಗಿಯೂ ಸಾಕಷ್ಟು ಮೂಲ ಸಮಸ್ಯೆ ಇಲ್ಲಿದೆ. ಪ್ರವಾಸಿಗರ ಅನುಕೂಲತೆಗೆ ಸೂಕ್ತ ವ್ಯವಸ್ಥೆಯಿಲ್ಲ. ಮಾರ್ಗದರ್ಶಿಗಳ ಕೊರತೆಯಿದೆ. ಶೌಚಾಲಯವಿಲ್ಲ, ಸ್ನಾನಗೃಹ, ತಂಗಲು ಸುಸಜ್ಜಿತ ನಿವಾಸಗಳಿಲ್ಲ. ಸಂಜೆಯ ಬಳಿಕ ಶಿರಸಿ, ಸೊರಬಕ್ಕೆ ಬಸ್ ಸೌಕರ್ಯವೂ ಇಲ್ಲ. ಅಲ್ಲದೇ ಪ್ರಸಿದ್ಧ ಕದಂಬೋತ್ಸವ ನಡೆಯುವ ವೇದಿಕೆ, ದೇವಸ್ಥಾನದ ನಿರ್ವಹಣೆಯಲ್ಲೂ ನಿರ್ಲಕ್ಷ್ಯ ಕಾಣುತ್ತಿದೆ.
ಬನವಾಸಿ ಅಭಿವೃದ್ಧಿ ಪ್ರಾಧಿಕಾರ ನಿಷ್ಕ್ರಿಯ: ಈ ಹಿಂದೆ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೂ ಸಹ ಅದು ಈಗ ನಿಷ್ಕ್ರಿಯವಾಗಿದೆ. ಆಗ ನಡೆದ ಒಂದಷ್ಟು ಅಭಿವೃದ್ಧಿ ಕೆಲಸವೇ ಅಂತಿಮ ಎಂಬಂತಾಗಿದೆ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ತಜ್ಞ ವೈದ್ಯರನ್ನು ನೇಮಿಸಬೇಕು. ದಿನದ 24 ತಾಸು ಕಾರ್ಯನಿರ್ವಹಿಸುವಂತೆ ಮಾಡಿದರೆ ಜನರಿಗೆ ಅನುಕೂಲ ಎಂಬುವುದು ಸಾರ್ವಜನಿಕರ ಆಗ್ರಹ.
ಬನವಾಸಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಜತೆಗೆ, ಆಡಳಿತ ತಾಣವಾಗಿರುವ ಕೇಂದ್ರವಾಗವ ಸಾಮರ್ಥ್ಯವನ್ನೂ ಹೊಂದಿದೆ. ಇಲ್ಲಿನ ಜನರು ಕಚೇರಿ ಕೆಲಸಕ್ಕೆ ದೂರದ ಶಿರಸಿಗೆ ಅಲೆಯುವ ಬದಲು ಬನವಾಸಿಯನ್ನೇ ತಾಲೂಕಾಗಿ ರಚಿಸಿದರೆ ಆಡಳಿತಕ್ಕೂ, ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ಹಲವು ವಿಶೇಷತೆಗಳನ್ನು ಹೊಂದಿರುವ ಬನವಾಸಿ ಅಭಿವೃದ್ಧಿಯಲ್ಲಿ ಇನ್ನಷ್ಟು ಮುಂದೆ ಬರಬೇಕಿದೆ. ಕನ್ನಡದ ಪ್ರಥಮ ರಾಜಧಾನಿಗೆ ಮತ್ತಷ್ಟು ಮೂಲ ಸೌಕರ್ಯ ಒದಗಿಸುವ ಕೆಲಸ ಆಡಳಿತ ವರ್ಗದಿಂದ ಆಗಬೇಕಿದೆ.
ಇದನ್ನೂ ಓದಿ: ಅನುದಾನ ಇಲ್ಲದೆ ಸೊರಗಿದ ನಾಡು, ನುಡಿ ಅಭಿವೃದ್ಧಿಗೆ ರಚಿತವಾದ ಪ್ರಾಧಿಕಾರಗಳು