ಕಾರವಾರ: ಕಳೆದ ತಿಂಗಳಲ್ಲಿ ಅನಾವರಣಗೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯನ್ನು ಮುಚ್ಚಿರುವುದನ್ನು ಖಂಡಿಸಿ, ಹಳಿಯಾಳದಲ್ಲಿ ಇಂದು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ವನಶ್ರೀ ವೃತ್ತದಲ್ಲಿರುವ ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ ಆವರಣದಲ್ಲಿ ಚೆನ್ನಮ್ಮ ಪ್ರತಿಮೆಯನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಅನಾವರಣಗೊಳಿಸಲಾಗಿತ್ತು. ಆದರೆ, ಸ್ಥಳೀಯ ಆಡಳಿತವು ಮೂರ್ತಿಯನ್ನು ಬಟ್ಟೆ ಮೂಲಕ ಮುಚ್ಚಿದ್ದರಿಂದ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ರಾಣಿ ಚೆನ್ನಮ್ಮಳನ್ನು ಅವಮಾನಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ತಕ್ಷಣ ತಹಶೀಲ್ದಾರ್ರು ಸ್ಥಳಕ್ಕಾಗಮಿಸಿ, ಮೂರ್ತಿ ಅನಾವರಣಗೊಳಿಸಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟರು.