ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿನ ಸರ್ಕಾರಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಸುಮಾರು ₹150 ಕೋಟಿ ವೆಚ್ಚದಲ್ಲಿ ಸರ್ಕಾರ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲು ಹಣ ಮಂಜೂರು ಮಾಡಿ ವರ್ಷವಾದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ.
ಸ್ಥಳೀಯ ರಾಜಕಾರಣಿಯೊಬ್ಬರು ಪರ್ಸೆಂಟೇಜ್ ಒತ್ತಡ ಹೇರುತ್ತಿರುವ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿರುವ ಆರೋಪ ಕೇಳಿ ಬಂದಿದೆ.
ಜಿಲ್ಲಾ ಕೇಂದ್ರ ಕಾರವಾರದಲ್ಲಿ ಐದು ವರ್ಷಗಳ ಹಿಂದೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗಿತ್ತು. ಯಾವುದೇ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕಾದರೆ 750 ಬೆಡ್ ಹಾಸಿಗೆ ಇರಬೇಕಾದ ಹಿನ್ನೆಲೆ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತವಿದ್ದ ವೇಳೆ ಮೆಡಿಕಲ್ ಕಾಲೇಜು ಆವರಣದಲ್ಲಿ ₹150 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು.
ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಯಡಿಯೂರಪ್ಪ ಸಿಎಂ ಆದ ಮೇಲೆ 2020ರಲ್ಲಿ ಹಣ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಬಿ.ಎಸ್.ಆರ್ ಎನ್ನುವ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಉತ್ತರ ಕನ್ನಡದಲ್ಲಿ ಖಾಸಗಿ ಆಸ್ಪತ್ರೆಗಳಿಲ್ಲ. ಕಾರಣ 450 ಬೆಡ್ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತದೆ ಎಂದು ಜನರು ಸಹ ಖುಷಿ ಪಟ್ಟಿದ್ದರು.
ಆದರೆ ಕಾಮಗಾರಿಗೆ ಗುತ್ತಿಗೆ ನೀಡಿ ವರ್ಷವಾಗುತ್ತಾ ಬಂದರು ಇನ್ನೂ ಒಂದು ಕಲ್ಲನ್ನು ಸಹ ಇಟ್ಟಿಲ್ಲ. ಸದ್ಯ ಕೋವಿಡ್ ಚಿಕಿತ್ಸೆಯನ್ನು ಮೆಡಿಕಲ್ ಕಾಲೇಜು ಕಟ್ಟಡದ ಕೋಣೆಗಳಲ್ಲಿ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಹಣ ಮಂಜೂರು ಮಾಡಿದರು ಇನ್ನೂ ಕಾಮಗಾರಿ ಪ್ರಾರಂಭ ಮಾಡದಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
₹150 ಕೋಟಿ ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಕಾಮಗಾರಿ ಗುತ್ತಿಗೆ ನೀಡಿದ ನಂತರ ಗುತ್ತಿಗೆ ಪಡೆದ ಕಂಪನಿ ಕಟ್ಟಡ ನಿರ್ಮಾಣ ಮಾಡುವ ಜಾಗವನ್ನು ಚುರುಕಿನಿಂದ ಕ್ಲೀನ್ ಮಾಡಿತ್ತು. ಆದರೆ ಕ್ಲೀನ್ ಮಾಡಿ ಐದಾರು ತಿಂಗಳಾದರು ಇನ್ನೂ ಒಂದು ಇಟ್ಟಿಗೆ ಸಹ ಇಟ್ಟಿಲ್ಲ.
ಇನ್ನೊಂದೆಡೆ ಗುತ್ತಿಗೆದಾರರಿಗೆ ಸ್ಥಳೀಯ ರಾಜಕಾರಣಿಗಳು ಪರ್ಸೆಂಟೇಜ್ ಕೇಳುತ್ತಿದ್ದು, ಇದೇ ಕಾರಣಕ್ಕೆ ಕಾಮಗಾರಿ ತಡವಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.