ಕಾರವಾರ: ಕಿಡಿಗೇಡಿಗಳು ರೈಲ್ವೆ ಹಳಿಯ ಬಳಿ ಹಚ್ಚಿದ ಬೆಂಕಿಯಿಂದ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ತಪ್ಪಿದೆ.
ಅಮದಳ್ಳಿ ಬಳಿ ಕೊಂಕಣ ರೈಲ್ವೆ ಮಾರ್ಗದ ಎರಡೂ ಬದಿ ಅಕೇಶಿಯಾ ಗಿಡಗಳು ದಟ್ಟವಾಗಿ ಬೆಳೆದಿವೆ. ಕೆಲ ದುಷ್ಕರ್ಮಿಗಳು ಕಟ್ಟಿಗೆ ಕಡಿಯುವ ದುರಾಸೆಯಿಂದ ಮಧ್ಯಾಹ್ನದ ವೇಳೆ ಸಾರ್ವಜನಿಕ ಸಂಚಾರ ಕಡಿಮೆ ಇರುವುದನ್ನು ಗಮನಿಸಿ ರೈಲ್ವೆ ಹಳಿಯ ಪಕ್ಕದ ಗಿಡಗಳಿಗೆ ಬೆಂಕಿ ಹಚ್ಚಿದ್ದರು. ಇದು ಮಧ್ಯಾಹ್ನ ದೊಡ್ಡ ಜ್ವಾಲೆಯಾಗಿ ಹಬ್ಬಿತ್ತು.
ಇದನ್ನು ಗಮನಿಸಿದ ಸ್ಥಳೀಯ ಶಿಕ್ಷಕ ಉದಯ ನಾಯ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ನಾಯ್ಕ ಅವರ ಮೂಲಕ ಅಗ್ನಿಶಾಮಕ ದಳದ ವಾಹನವನ್ನು ಕರೆಸಿ ಬೆಂಕಿ ನಂದಿಸಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಬೆಂಕಿ ಸಂಪೂರ್ಣ ಆರುವವರೆಗೂ ರೈಲ್ವೆ ಸಂಚಾರವನ್ನು ತಾತ್ಕಾಲಿಕವಾಗಿ ತಡೆದು ನಿಲ್ಲಿಸಲಾಗಿತ್ತು. ಸ್ಥಳದಲ್ಲಿ ಅಮದಳ್ಳಿ ಗ್ರಾಮ ಪಂಚಾಯತಿ ಸದಸ್ಯ ರಾಜೇಶ್ ಮಡಿವಾಳ, ಗ್ರಾಮ ಪಂಚಾಯತಿ ಸಿಬ್ಬಂದಿ ಸಂತೋಷ್ ಚಿಂಚನ್ಕರ್ ಉಪಸ್ಥಿತರಿದ್ದರು.