ಕಾರವಾರ: ಸೂಪಾ ಆಣೆಕಟ್ಟೆ ಬಳಿ ಸೇತುವೆ ಮೇಲೆ ಸೆಲ್ಫಿ ತೆಗೆಯುವಾಗ ಕಾಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಪ್ರೇಮಿಗಳು ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಜೊಯಿಡಾ ತಾಲೂಕಿನ ಗಣೇಶಗುಡಿಗೆ ಪ್ರವಾಸಕ್ಕೆ ಆಗಮಿಸಿದ್ದ ಪ್ರೇಮಿಗಳು ಸೋಮವಾರ ರಾಜ್ಯದ ಅತಿ ದೊಡ್ಡ ಸೂಪಾ ಡ್ಯಾಮ್ ಬಳಿ ಇರುವ ಸೇತುವೆ ಮೇಲೆ ಸೆಲ್ಫಿ ತೆಗೆಯುವಾಗ ಕಾಲುಜಾರಿ ಕಾಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದರು. ಬಳಿಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಬೋಟ್ ನಡೆಸುವವರು ನದಿಯಲ್ಲಿ ಬೋಟ್ ಹಾಗೂ ಕಯಾಕ್ ಮೂಲಕ ತಡರಾತ್ರಿವರೆಗೂ ಹುಡುಕಾಡಿದ್ದರು ಸಹ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಇಬ್ಬರ ಮೃತದೇಹವನ್ನು ಪತ್ತೆಹಚ್ಚಿ ದಡಕ್ಕೆ ತಂದಿದ್ದಾರೆ. ಬೀದರ್ ಮೂಲದ ಪುರುಷೋತ್ತಮ ಪಾಟೀಲ್ ಹಾಗೂ ರಕ್ಷಿತಾ ಮೃತಪಟ್ಟ ಪ್ರೇಮಿಗಳಾಗಿದ್ದಾರೆ.
ರಕ್ಷಿತಾ ಕಲಬುರಗಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಪ್ರವಾಸಕ್ಕೆಂದು ಪ್ರಿಯಕರನ ಜೊತೆ ಆಗಮಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತಂತೆ ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.