ಭಟ್ಕಳ: ದಶಕಗಳ ಕಾಲ ಭಾರತವನ್ನು ಆಳಿದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಇಲ್ಲಿನ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಬದಲು ನೆರೆ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ಬಂದ ಅಲ್ಲಿನ ಅಲ್ಪಸಂಖ್ಯಾತರ ಸಂಕಷ್ಟಗಳ ನಿವಾರಣೆಗೆ ನೀಡಿದ್ದರೆ ಇಂದು ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಭಟ್ಕಳ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು
ಅವರು ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಸಹಿ ಸಂಗ್ರಹ ಮತ್ತು ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾಯ್ದೆಯ ಪರ ಇಲ್ಲಿನ ಅಲ್ಪಸಂಖ್ಯಾತರನ್ನು ತಪ್ಪು ಸಂದೇಶ ನೀಡಲಾಗುತ್ತಿದೆ. ಮುಸ್ಲಿಂ ಸಮುದಾಯದವರನ್ನು ದೇಶದಿಂದ ಹೊರಹಾಕಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಪಾಕಿಸ್ತಾನ, ಅಪಘಾನಿಸ್ತಾನ, ಮತ್ತು ಬಾಂಗ್ಲಾ ದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗಾಗಿ ಈ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ ವಿನಃ ಮುಸ್ಲಿಂ ಸಮುದಾಯದ ಧಮನಕ್ಕಲ್ಲ ಎಂದು ಹೇಳಿದರು.
ಇನ್ನು ಸಂತೆಗೆಂದು ಆಗಮಿಸಿದ ಸಹಸ್ರಾರು ಜನರು ಈ ಅಭಿಯಾನದಲ್ಲಿ ಭಾಗಿಯಾಗಿ ಸಹಿ ನೀಡಿದರು. ಅಭಿಯಾನದಲ್ಲಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ಶ್ರೀನಿವಾಸ ನಾಯ್ಕ, ಸಂದೀಪ ಶೇಟ್, ಶಿವಾನಿ ಶಾಂತಾರಾಮ, ಕೇದಾರ ಕೊಲ್ಲೆ, ದಾಸ ನಾಯ್ಕ ತಲಗೋಡ ಸೇರಿದಂತೆ ಇತರರು ಇದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ಪರ ಬೃಹತ್ ಜಾಥಾ:
ರಾಜ್ಯಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಪರ ಸಹಿ ಸಂಗ್ರಹ ಹಾಗೂ ಮನೆ ಮನೆ ತೆರಳಿ ಜನರಲ್ಲಿ ಕಾಯ್ದೆಯ ಬಗ್ಗೆ ಭಿತ್ತಿಪತ್ರದ ಮೂಲಕ ಜನಜಾಗೃತಿ ಅಭಿಯಾನದ ಬೆನ್ನಲ್ಲೇ ಭಟ್ಕಳ ಬಿಜೆಪಿ ಮಂಡಲದಿಂದಲೂ ನಡೆಯುತ್ತಿದ್ದು, ಇದೇ ಜನವರಿ 13ರಂದು ಪೌರತ್ವ ತಿದ್ದುಪಡಿ ಕಾಯ್ದೆ ಪರ ಬೃಹತ್ ಜಾಥಾವೂ ನಡೆಯಲಿದ್ದು, ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭಗೊಳ್ಳುವ ಜಾಥಾವೂ ತಹಸೀಲ್ದಾರ್ ಕಚೇರಿ ಪಕ್ಕದ ಆಟೋ ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ಸಮಿತಿ ಆವರಣದಲ್ಲಿ ಬಂದು ತಲುಪಲಿದೆ. ನಂತರ ಸಾರ್ವಜನಿಕನ್ನುದ್ದೇಶಿಸಿ ಕಾಯ್ದೆ ಪರ ಸಾಕಷ್ಟು ಮಂದಿ ಮಾತನಾಡಲಿದ್ದಾರೆಂದು ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ತಿಳಿಸಿದ್ದಾರೆ.