ಉಡುಪಿ: ಇಲ್ಲೊಬ್ಬರು ಗ್ರಾಮದ ಅಧ್ಯಕ್ಷ ರೈತರಿಗೆ ಬೆಂಗಾವಲಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ತನ್ನ ಗ್ರಾಮದ ಬಂಜರು ಭೂಮಿಯಲ್ಲಿ ಕೃಷಿ ಮಾಡಲು ಹೊರಟಿದ್ದಾರೆ.
ಇವರು ಸುರೇಶ್ ನಾಯಕ್. ಉಡುಪಿ ಜಿಲ್ಲೆ ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ. ವೃತ್ತಿಯಲ್ಲಿ ಕೃಷಿಕರಾಗಿರುವ ಸುರೇಶ್ ನಾಯಕ್ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಡೈರೆಕ್ಟ್ ಮಾರ್ಕೆಟ್ ಶುರು ಮಾಡಿದ್ದಾರೆ. ಸುತ್ತಲ ರೈತರು ಬೆಳೆದ ತರಕಾರಿಗಳನ್ನು ತಂದು ಉತ್ತಮ ಬೆಲೆಗೆ ಮಾರುತ್ತಾರೆ. ದುಡ್ಡನ್ನೆಲ್ಲಾ ರೈತರಿಗೆ ಕೊಡುತ್ತಾರೆ.
ತಾವು ಬೆಳೆದ ಕಲ್ಲಂಗಡಿ, ಸೌತೆ, ಬದನೆಕಾಯಿ, ಕರ್ಬುಜ ಹಣ್ಣು ಮಾರುಕಟ್ಟೆಯಲ್ಲಿ ಎಲ್ಲೂ ಸಿಗದ ಅಗ್ಗದ ದರಕ್ಕೆ ಇಲ್ಲಿ ಸಿಗುತ್ತದೆ. ಅಧ್ಯಕ್ಷನಾದ ಮೇಲೆ ಪ್ರತಿ ವಾರ್ಡ್ನಲ್ಲಿ ಬಂಜರು ಭೂಮಿಯಲ್ಲಿ ಕೃಷಿ, ಬೇಸಾಯ, ತರಕಾರಿ ಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ. ಭೂಮಿ ಇರುವವರು ಖಾಲಿ ಬಿಡಬಾರದೆಂಬ ಉದ್ದೇಶದಿಂದ ಮೊದಲ ಮೀಟಿಂಗ್ನಲ್ಲೇ ಈ ಬಗ್ಗೆ ಮಾಹಿತಿ ಕಲೆ ಹಾಕುವ, ಕೃಷಿಕರಿಗೆ ಉತ್ತೇಜನ ನೀಡುವಂತೆ ಮಾಡಿದ್ದಾರೆ. ಸುಮಾರು 400 ಎಕರೆ ಬಂಜರು ಭೂಮಿಯನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದೆ.
ಬೊಮ್ಮರಬೆಟ್ಟುವಿನಲ್ಲಿ ದಾನಿಗಳನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸುವ ಆಲೋಚನೆಯೂ ಇದೆ. ಈ ಮೂಲಕ ಯಂತ್ರೋಪಕರಣ ಬಳಸಿ ಕೃಷಿ ಮಾಡಿಸಲಾಗುತ್ತದೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭ ಟನ್ ಗಟ್ಟಲೆ ಕಲ್ಲಂಗಡಿ, ಈರುಳ್ಳಿ ಡೈರೆಕ್ಟ್ ಮಾರ್ಕೆಟ್ ಮಾಡಿದ ಅನುಭವ ಇರುವುದರಿಂದ ರೈತರ ಪಾಲು ರೈತರಿಗೆ ಸಿಗಲಿದೆ. ರಾಜ್ಯದ ಪ್ರತಿ ಗ್ರಾಮದಲ್ಲೂ ಇಂತಹ ಪ್ಲ್ಯಾನ್ ಜಾರಿಗೆ ಬರಬೇಕು ಎಂಬುದೇ ಇವರ ಉದ್ದೇಶ.