ಉಡುಪಿ: ಗೋಹತ್ಯೆ ಮಾನವೀಯತೆಗೆ ಎಸಗುವ ದ್ರೋಹ. ಕೂಡಲೇ ಗೋಹತ್ಯೆ ನಿಷೇಧ ಜಾರಿಯಾಗಬೇಕು. ಭಾರತದ ರಾಷ್ಟ್ರೀಯ ಪ್ರಾಣಿ ಗೋವು ಆಗಲಿ. ಆ ಸ್ಥಾನ ಹುಲಿಗೆ ನೀಡಿರುವುದಕ್ಕೆ ಭಯೋತ್ಪಾದನೆ ಹೆಚ್ಚಾಗಲು ಕಾರಣ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೃಷ್ಣಮಠದ ಸಂತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆತಂಕವಾದ ಅನುಕಂಪವಾದ ಆಗಬೇಕು. ಗಂಗೆ ನಮ್ಮನ್ನು ಶುದ್ಧೀಕರಣ ಮಾಡಬೇಕು. ವಿಪರ್ಯಾಸ ಎಂದರೆ, ನಾವು ಗಂಗೆಯನ್ನು ಶುದ್ಧಿ ಮಾಡುವ ಸ್ಥಿತಿಗೆ ಬಂದಿರುವುದು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಹಾಗೂ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಗೊಳಿಸಲು ಮುಂದಾಗಬೇಕು. ಈ ಕುರಿತು ಎಲ್ಲ ಧರ್ಮೀಯರು ಸೇರಿ ಒಂದು ಸಭೆ ನಡೆಸಿ ಚರ್ಚಿಸಬೇಕಾಗಿದೆ ಎಂದು ಹೇಳಿದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒಂದೆಡೆ ಮಸೀದಿಗೆ, ಇನ್ನೊಂದೆಡೆ ಶಬರಿಮಲೆಗೆ ಮಹಿಳೆಯರ ಪ್ರವೇಶಬೇಕೆಂಬ ಒತ್ತಾಯವಿದೆ. ಸದ್ಯ ಈ ಪ್ರಕರಣದ ತೀರ್ಪು ಏಳು ಸದಸ್ಯರ ಪೀಠದ ಮುಂದಿದೆ. ಅವರು ಸರಿಯಾಗಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಪ್ರಧಾನಿ ದಿಟ್ಟತನದವರು. ಕಾಶ್ಮೀರ, ರಾಮಮಂದಿರ ಸಮಸ್ಯೆ ನಿವಾರಣೆಯಾಯ್ತು. ಶೀಘ್ರ ರಾಮಮಂದಿರ ನಿರ್ಮಾಣವಾಗಲಿದೆ ಎಂದರು.