ಉಡುಪಿ: ಕರಾವಳಿ ತೀರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಸುರಕ್ಷತೆಯೂ ಬಹಳ ಮುಖ್ಯವಾಗಿದ್ದು, ಹವಾಮಾನ ವೈಪರೀತ್ಯಗಳ ಮೇಲೆ ನಿಗಾ ಇರಿಸುವ ಸವಾಲೂ ಕೂಡ ಇದೆ. ಈ ನಿಟ್ಟಿನಲ್ಲಿ ಸಮುದ್ರ ಮಾರ್ಗದಲ್ಲಿ ಬರುವ ಎಲ್ಲಾ ಅಪಾಯಗಳ ಎಚ್ಚರಿಕೆ ನೀಡುವ ಆ್ಯಪ್ವೊಂದು ಚಾಲ್ತಿಗೆ ಬಂದಿದೆ.
ಶಾಂತವಾಗಿರುವ ಕಡಲಿನಲ್ಲಿ ಒಮ್ಮೊಮ್ಮೆ ಅಪಾಯದ ಬಿರುಗಾಳಿಯೂ ಬೀಸುವುದುಂಟು. ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಕಡಲ ಮಾರ್ಗದ ಅಪಾಯಗಳ ಕರೆಗಂಟೆಗಳು ಹೊಡೆಯಲಾರಂಭಿಸಿತ್ತು. ಹಾಗಾಗಿ ಕಡಲಿನಿಂದ ಬರಬಹುದಾದ ಎಲ್ಲಾ ಅಪಾಯಗಳನ್ನು ಎದುರಿಸಲು ಅನುಕೂಲವಾಗುವಂತ ಆ್ಯಪ್ವೊಂದು ಸಿದ್ಧವಾಗಿದೆ.
ಈ ನೂತನ ಆ್ಯಪ್ ಹೆಸರು ‘ಕಡಲು’. ದಿನನಿತ್ಯ ಸಾವಿರಾರು ಬೋಟ್ಗಳು ಕಡಲಿಗಿಳಿಯುತ್ತವೆ. ಅದರಲ್ಲಿ ಯಾರ್ಯಾರು ಪ್ರಯಾಣಿಸುತ್ತಾರೆ ಎನ್ನುವುದರ ಮಾಹಿತಿ ಇರುವುದಿಲ್ಲ. ಇನ್ನು ಮುಂದೆ ಪ್ರತಿಯೊಂದು ಬೋಟ್ನವರೂ ಈ ಆ್ಯಪ್ ಅಳವಡಿಸಿಕೊಳ್ಳಬೇಕು. ಬಂದರು ಪ್ರದೇಶದಿಂದ ತೆರಳಿದ ಮತ್ತು ವಾಪಸಾದ ವಿವರಗಳನ್ನು ದಾಖಲಿಸಬೇಕು.
ಓದಿ: ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ... ಮೀನುಗಾರರು ಜಲಸಮಾಧಿ ಶಂಕೆ!?
ಬೋಟಿನಲ್ಲಿ ಇರುವವರ ವಿವರವೂ ಒಳಗೊಂಡಿರಬೇಕು. ದೋಣಿಯ ನೋಂದಣಿ ಸಂಖ್ಯೆ, ಹೆಸರು, ಆಧಾರ್ ನಂಬರ್ ನಮೂದಿಸಬೇಕು. ಇದರಿಂದ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಕಡಲಿನಲ್ಲಿ ಇರುವ ಮೀನುಗಾರರ ಸ್ಪಷ್ಟ ಲೆಕ್ಕಾಚಾರ ಮತ್ತು ವಿವರ ಲಭ್ಯವಾಗುತ್ತದೆ.
ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟು ಕಣ್ಮರೆಯಾಗಿ ಎರಡು ವರ್ಷ ಕಳೆದರೂ ಏಳು ಮಂದಿ ಮೀನುಗಾರರ ಸುಳಿವೇ ಇಲ್ಲ. ಈ ಆ್ಯಪ್ ಅಳವಡಿಸಿದರೆ ಬೋಟ್ನ ಚಲನವಲನ, ಮೀನುಗಾರಿಕೆ ನಡೆಸುವ ಸ್ಥಳಗಳ ಮಾಹಿತಿ ಲಭ್ಯವಾಗುತ್ತೆ. ಈ ಮೂಲಕ ಮತ್ತೊಂದು ದುರಂತ ನಡೆಯದಂತೆ ತಪ್ಪಿಸಬಹುದು.
ಜೊತೆಗೆ ಹವಾಮಾನ ವೈಪರೀತ್ಯಗಳ ಮಾಹಿತಿಯೂ ಮೀನುಗಾರರಿಗೆ ಲಭ್ಯವಾಗುತ್ತೆ. ಹವಾಮಾನ ಏರಿಳಿತಗಳ ಪೂರ್ವ ಸೂಚನೆ ಸಿಕ್ಕ ಕೂಡಲೇ ಮೀನುಗಾರರಿಗೆ ಮಾಹಿತಿ ನೀಡಬಹುದು. ಈ ಮೂಲಕ ಕಡಲ ನಡುವಿನಿಂದ ದಡ ಸೇರಲು ಅನುಕೂಲವಾಗುತ್ತೆ. ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡ ತಕ್ಷಣ ಎಲ್ಲಾ ವಿವರಗಳೂ ಲಭ್ಯವಾಗುತ್ತೆ.
ಮುಂದಿನ ದಿನಗಳಲ್ಲಿ ಮೀನಿನ ಲಭ್ಯತೆ ಕಡಲಿನ ಯಾವ ಭಾಗದಲ್ಲಿದೆ ಎನ್ನುವುದರ ಮಾಹಿತಿಯೂ ಈ ಆ್ಯಪ್ನಲ್ಲಿ ಲಭ್ಯವಾಗಲಿದೆ. ದೇಶದ ಸುರಕ್ಷತೆಯ ಜೊತೆಗೆ ಮೀನುಗಾರರ ಹಿತ ಕಾಯಲು ಈ ತಂತ್ರಜ್ಞಾನ ಬಹುಪಯೋಗಿ ಆಗಲಿದೆ.
ಓದಿ: ಮಲ್ಪೆ ಮೀನುಗಾರರ ಬೋಟ್ ಅವಶೇಷ ಪತ್ತೆ... ಶಾಸಕ ರಘುಪತಿ ಭಟ್ ಹೇಳಿದ್ದೇನು?