ತುಮಕೂರು: ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟಿಪ್ಪುಸುಲ್ತಾನ್ ಯಾವುದೇ ಸಂತ ಅಲ್ಲ, ಅಲ್ಲದೆ ಮುಸ್ಲಿಂ ಸಮುದಾಯದಲ್ಲಿ ಜಯಂತಿ ಮಾಡುವಂತಹ ಪದ್ಧತಿಯೇ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ತ್ರಿವಿಧ ದಾಸೋಹದ ಮೂಲಕ ತುಮಕೂರು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜಿಲ್ಲೆಯಿಂದ ಅನೇಕ ಸಾಹಿತಿಗಳು, ಚಲನಚಿತ್ರ ನಟರು ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಇನ್ನು ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ ಅವರು, ವಿವಿಧ ಸಂತರ ಜಾತಿ ಮೇಲೆಯೂ ಅಥವಾ ಅವರ ನಡತೆ ಮೇಲೆಯೂ ನಾವು ಜಯಂತಿಗಳನ್ನು ಮಾಡಿದ್ದೇವೆ. ಆದರೆ ಮೊದಲ ಬಾರಿಗೆ ಈ ರೀತಿಯ ಆಳ್ವಿಕೆ ಮಾಡಿದವರ ಜಯಂತಿಯನ್ನು ಆಚರಣೆಗೆ ತರಬಾರದಿತ್ತು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ನಾನು ಈಗಾಗಲೇ ಸಿದ್ದರಾಮಯ್ಯ ಅವರ ಬಳಿ ಕೂಡ ಈ ಕುರಿತು ಪ್ರಸ್ತಾಪ ಮಾಡಿದ್ದೇನೆ, ನಾವುಗಳು ಆಳ್ವಿಕೆ ಮಾಡಿದವರ ಜಯಂತಿಗಳನ್ನು ಆಚರಣೆ ಮಾಡಿಲ್ಲ. ಹಾಗಾದರೆ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಕೂಡ ನಾವು ಮಾಡಬೇಕಿತ್ತು ಎಂದರು.