ತುಮಕೂರು: ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಅರ್ಜಿಗಳನ್ನು ಗಮನಿಸದೆ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪಾವಗಡ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ಅವರನ್ನು ಅಮಾನತುಗೊಳಿಸಿ ಎಸ್ಪಿ ಕೋ.ನ. ವಂಶಿ ಕೃಷ್ಣ ಆದೇಶ ಹೊರಡಿಸಿದ್ದಾರೆ.
ಪಾವಗಡದಲ್ಲಿನ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಕಳವು ಮಾಡಿ, 1 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದಂತೆ 2019ರ ಸೆಪ್ಟೆಂಬರ್ 30ರಂದು ಶಂಕರನಾಯ್ಕ ಎಂಬುವರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ ಠಾಣೆಯ ಸಿಬ್ಬಂದಿ ರಂಗನಾಥ್ ದೂರು ಸ್ವೀಕರಿಸಿ, ವಂಚನೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.
ಮತ್ತೊಂದು ಪ್ರಕರಣದಲ್ಲಿ ಅಕ್ಟೋಬರ್ 23ರಂದು ರಾಜವಂಶಿ ಗ್ರಾಮದ ಅಡಿವಪ್ಪ ಎಂಬುವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಅಪರಿಚಿತ ವ್ಯಕ್ತಿ ವಂಚಿಸಿ, ಅವರ ಖಾತೆಯಿಂದ 25 ಸಾ.ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಠಾಣೆಯ ಸಿಬ್ಬಂದಿ ರಂಗನಾಥ್ ಅವರಿಗೆ ಅಡಿವಪ್ಪ ದೂರು ನೀಡಿದ್ದರು. ಆದ್ರೆ ವಂಚನೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.
ನಂತರ ದೇವರಹಟ್ಟಿ ಗ್ರಾಮದ ಈರಣ್ಣ ಎಂಬಾತನನ್ನು ಬಂಧಿಸಿದ್ದ ಪಾವಗಡ ಠಾಣೆ ಪೊಲೀಸರು, ಆರೋಪಿಯು ಎಟಿಎಂ ಕಾರ್ಡನ್ನು ಕಳವು ಮಾಡಿ ಹಣ ಡ್ರಾ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಈ ಹಿಂದೆ ದೂರು ನೀಡಿದ್ದ ಶಂಕರನಾಯ್ಕ ಅವರನ್ನು ಠಾಣೆಗೆ ಕರೆಸಿ ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದಲ್ಲದೆ ತೀರ್ಥಕುಮಾರ್ ಎಂಬುವರು ಪಾವಗಡದ ಶನೇಶ್ವರ ದೇಗುಲಕ್ಕೆ ಬಂದಿದ್ದಾಗ ಅಪರಿಚಿತ ವ್ಯಕ್ತಿಗಳು ಅವರ ಜೇಬಿನಲ್ಲಿ 86 ಸಾವಿರ ರೂ. ಜೇಬುಗಳ್ಳತನ ಮಾಡಿದ್ದರು. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.
ಹೀಗಾಗಿ ಮೂರೂ ಪ್ರಕರಣಗಳಲ್ಲಿ ದಾಖಲಾದ ದೂರುಗಳ ಕುರಿತು ಪರಿಶೀಲನೆ ನಡೆಸದೆ, ಬೇಜವಾಬ್ದಾರಿ ವರ್ತನೆ ತೋರಿದ್ದಕ್ಕಾಗಿ ಪಾವಗಡ ಠಾಣೆ ಸಬ್ ಇನ್ಸ್ಪೆಕ್ಟರ್ ಜಿ.ಕೆ. ರಾಘವೇಂದ್ರ ಅವರನ್ನು ಅಮಾನತು ಮಾಡಿರುವುದಾಗಿ ಎಸ್ಪಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.