ತುಮಕೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರ ನೇತೃತ್ವದಲ್ಲಿ ಫೆ.16ರಂದು ಬೆಂಗಳೂರಿನ ನೈಸ್ ರೋಡ್ ಪಕ್ಕದಲ್ಲಿರುವ ನಂದಿ ಗ್ರೌಂಡ್ಸ್ನಲ್ಲಿ ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಚಿತ್ರದುರ್ಗದ ಶಾಖಾಮಠದ ನಾಯಕನಹಟ್ಟಿ ಕ್ಷೇತ್ರದ ಶ್ರೀ ತಿಪ್ಪೇರುದ್ರಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಕೇಂದ್ರಗಳು ಮತ್ತು ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವಜನಾಂಗದ ಮಠಾಧೀಶರ ಸಹಯೋಗದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಜೊತೆಗೆ ಬಸವತತ್ತ್ವ ಚಿಂತನೆ ಆಧರಿಸಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಮ್ಮೇಳನವು ಸಮಾಜದಲ್ಲಿ ಜಾಗತಿಕ, ಶಾಂತಿ, ನೆಮ್ಮದಿ ಮತ್ತು ಪ್ರಗತಿ ಉದ್ದೇಶದಿಂದ ನಡೆಯುತ್ತಿದೆ. ಈ ಹಿಂದೆ ಬಸವಣ್ಣನವರ ನೇತೃತ್ವದಲ್ಲಿ 1.90 ಲಕ್ಷ ಗಣಂಗಳು ಸಮಾವೇಶಗೊಂಡಿದ್ದವು ಎಂಬುದು ಒಂದು ಇತಿಹಾಸ. ಅದನ್ನು 21ನೇ ಶತಮಾನದಲ್ಲಿ ಮರುಸೃಷ್ಟಿ ಮಾಡುವ ಉದ್ದೇಶದಿಂದ ಫೆ. 16ರಂದು ಭಾನುವಾರ ಬೆಳಗ್ಗೆ 8 ಗಂಟೆಗೆ ಶಿವಯೋಗ ಸಂಭ್ರಮ ಎಂಬ ಧ್ಯಾನ ಪರಂಪರೆ ಜರುಗಲಿದೆ. ನಂತರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಅಸಂಖ್ಯ ಪ್ರಮಥ ಗಣಮೇಳದಲ್ಲಿ ವಿವಿಧ ಧಾರ್ಮಿಕ ಮುಖಂಡರಾದ ದಲೈಲಾಮ, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಡಾ. ಡಿ. ವೀರೇಂದ್ರ ಹೆಗ್ಗಡೆ, ಸುತ್ತೂರು ಶ್ರೀಗಳು, ರವಿಶಂಕರ್ ಗುರೂಜಿ ಸೇರಿದಂತೆ ರಾಜ್ಯ-ರಾಷ್ಟ್ರಮಟ್ಟದ ಧಾರ್ಮಿಕ ಮುಖಂಡರು, ಸಂತರು, ಸರ್ವಜನಾಂಗದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಧಾರ್ಮಿಕ ಸಮಾವೇಶದಲ್ಲಿ ಲಿಂಗ ದೀಕ್ಷೆ ಕಾರ್ಯಕ್ರಮ ನಡೆಯಲಿದ್ದು, ಲಿಂಗ ದೀಕ್ಷೆ ಪಡೆದ ಅವರೆಲ್ಲರಿಗೂ ಶಿವಲಿಂಗವನ್ನು ಉಚಿತವಾಗಿ ನೀಡಲಾಗುವುದು. ಈಗಾಗಲೇ 25ಸಾವಿರ ಶಿವಲಿಂಗಗಳು ಸಿದ್ಧಗೊಂಡಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.