ತುಮಕೂರು: ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಈಡಿ ವಿಚಾರಣೆ ನಡೆಯುತ್ತಿದೆ. ಈ ನಡುವೆ, ಇಡಿ ನೋಟಿಸ್ ನೀಡಿದ ಹಿನ್ನೆಲೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ದೆಹಲಿಯಲ್ಲಿ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ಯಾವ ರೀತಿಯ ವಿಚಾರಣೆ ಎಂಬುದನ್ನು ನೋಟಿಸ್ನಲ್ಲಿ ಸ್ಟಷ್ಟವಾಗಿ ತಿಳಿಸಿಲ್ಲ ಎಂದು ಈಗಾಗಲೇ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದರು. ಡಿ.ಕೆ.ಶಿವಕುಮಾರ್ ಪ್ರಕರಣ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೊಂದೆಡೆ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ಗೆ 300 ಕೋಟಿ ರೂ. ಹಣವನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿದ್ದು, ಈ ಕುರಿತಂತೆ ಮಾಹಿತಿ ಪಡೆಯಲು ಇಡಿ ನೋಟಿಸ್ ನೀಡಿರಬಹುದು ಎಂದು ಕೆ.ಎನ್. ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದರು.
ಅಲ್ಲದೆ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ರೀತಿಯ ಹಣಕಾಸು ವ್ಯವಹಾರ ಇರಲಿಲ್ಲ ಎಂದೂ ಕೂಡ ಸ್ಪಷ್ಟಪಡಿಸಿದ್ದರು. ಹರ್ಷಾ ಶುಗರ್ಸ್ಗೆ ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ಒಳಗೊಂಡ ಅಪೆಕ್ಸ್ ಬ್ಯಾಂಕ್ನಿಂದ 300 ಕೋಟಿ ಸಾಲ ನೀಡಲಾಗಿತ್ತು. ಹೆಬ್ಬಾಳ್ಕರ್ ಸಾಲ ಪಡೆದ ಸಂದರ್ಭದಲ್ಲಿ ಯಾವ ದಾಖಲೆಗಳನ್ನು ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ಪಡೆಯಲು ಇಡಿ ಅಧಿಕಾರಿಗಳು ನನಗೆ ಹಾಜರಾಗಲು ಕರೆದಿರಬಹುದು ಎಂದು ಹೇಳಿದ್ದರು.
ತುಮಕೂರು ಡಿಸಿಸಿ ಬ್ಯಾಂಕಿನಿಂದ 25 ಕೋಟಿ, ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ನಿಂದ 100 ಕೋಟಿ, ಬಿಜಾಪುರ ಡಿಸಿಸಿ ಬ್ಯಾಂಕ್ನಿಂದ 10 ಕೋಟಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ನಿಂದ 40 ಕೋಟಿ ರೂ. ಸೇರಿದಂತೆ ಒಟ್ಟು 300 ಕೋಟಿ ಸಾಲ ನೀಡಲಾಗಿತ್ತು ಎಂದು ತಿಳಿಸಿದ್ದರು.