ತುಮಕೂರು : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ರಸ್ತೆ ಬದಿ ಹೋಗುತ್ತಿದ್ದ ನಾಗರಹಾವನ್ನು ಕೈಗೆ ಸುತ್ತಿಕೊಂಡು ಹುಚ್ಚಾಟ ಮೆರೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ವೆಲ್ಡಿಂಗ್ ಕೆಲಸ ಮಾಡುತ್ತಿರುವಾ ಸಲೀಮ್ ಎಂಬಾತ ಹಾವು ಹಿಡಿದು ಕೈಗೆ ಸುತ್ತಿಕೊಂಡ ಸಂದರ್ಭದಲ್ಲಿ ಹಾವು ಎರಡು ಬಾರಿ ಕಚ್ಚಿದರೂ ಈತ ಅದನ್ನು ಬಿಡದೇ ಬಡಾವಣೆಯಲ್ಲಿ ಓಡಾಡಿದ್ದಾನೆ. ನಂತರ ಸಾರ್ವಜನಿಕರು ಹಾಗೂ ಸ್ಥಳದಲ್ಲಿದ್ದವರು ಹಾವು ಬಿಡುವಂತೆ ಎಷ್ಟೇ ಹೇಳಿದರೂ ಮಂಡಾಟ ತೋರಿದ್ದಾನೆ. ಹಾವು ಮತ್ತೊಮ್ಮೆ ಕಚ್ಚಲು ಯತ್ನಿಸುತ್ತಿದ್ದ ವೇಳೆ ಆತನ ಕೈಯಿಂದ ಜಾರಿ ಪೊದೆಯೊಳಗೆ ಪರಾರಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್, ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.
ಚಿಕಿತ್ಸೆಗೆ ದಾಖಲಾಗಿದ್ದ ಸಲೀಂ ಆಸ್ಪತ್ರೆಯಿಂದ ಪರಾರಿ : ಸ್ಥಳದಲ್ಲಿದ್ದವರು ಹಾವು ಕಚ್ಚಿಸಿಕೊಂಡು ರಕ್ತ ಗಾಯಗಳಿಂದ ಒದ್ದಾಡುತ್ತಿದ್ದ ಸಲೀಂನನ್ನು ತುಮಕೂರು ಜಿಲ್ಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸಲೀಂಗೆ ವೈದ್ಯರು ಚಿಕಿತ್ಸೆ ನೀಡಿ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಿಸುತ್ತಿದ್ದಂತೆ, ಆತ ಅಲ್ಲಿಂದಲೂ ಕೂಡ ಪರಾರಿಯಾಗಿದ್ದಾನೆ. ಇದೀಗ ಸಂಬಂಧಿಕರು ಆತನ ಪತ್ತೆಗಾಗಿ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ: ಇಲಿ ಎಂದು ಚಡ್ಡಿ ನುಂಗಿ ಒದ್ದಾಡಿದ ನಾಗಪ್ಪ - ವಿಡಿಯೋ