ತುಮಕೂರು: ಕುಡಿಯುವ ನೀರನ್ನು ಸರಿಯಾಗಿ ಪೂರೈಸದ ಕಾರಣ 28 ಹಾಗೂ 29 ನೇ ವಾರ್ಡಿನ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು, ಮಹಾನಗರ ಪಾಲಿಕೆ ಮುಂದೆ ನೀರು ಕೊಡಿ ಎಂದು ಘೋಷಣೆ ಕೂಗಿದರು. ಸುಮಾರು 200ಕ್ಕೂ ಹೆಚ್ಚು ಜನರು ಪಾಲಿಕೆಗೆ ಮುತ್ತಿಗೆ ಹಾಕಿದರು.
ನಗರದ ಮರಳೂರು ದಿಣ್ಣೆ, ಜನತಾ ಕಾಲೋನಿ ನಿವಾಸಿಗಳು ಇಂದು ಏಕಾಏಕಿ ತುಮಕೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು. ನೀರು ಕೊಡದೆ ಇಲ್ಲಿಂದ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಳೆದ ಎರಡು ತಿಂಗಳಿನಿಂದ ಇದೇ ಸಮಸ್ಯೆ ಕಾಡುತ್ತಿದೆ. ಕಾರ್ಪೊರೇಟರ್ಗೆ ಫೋನ್ ಮಾಡಿದ್ರೆ, ಅವರು ರಿಸೀವ್ ಮಾಡುವುದಿಲ್ಲ. ಇನ್ನು ಆಯುಕ್ತರಿಗೆ ಕರೆ ಮಾಡಿದರೆ ಅವರು ಸಹ ಪ್ರತಿಕ್ರಿಯಿಸುವುದಿಲ್ಲ ಎಂದು ದೂರಿದರು.
ನಮಗೆ ಕುಡಿಯಲು ನೀರು ಸಿಗುತ್ತಿಲ್ಲ, ಹೀಗಾದರೆ ನಮ್ಮ ಪರಿಸ್ಥಿತಿಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ? ಎಂದು ವಾರ್ಡ್ ನಿವಾಸಿಗಳು ಮಹಾನಗರಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.