ತುಮಕೂರು: ಕೊರೊನಾ ಬಿಕ್ಕಟ್ಟಿನ ವೇಳೆ ಅತಿಥಿ ಉಪನ್ಯಾಸಕರ ಸಂಭಾವನೆಗೆ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಅನರ್ಹ ವ್ಯಕ್ತಿಗಳಿಗೆ ಪಾವತಿಸಿ ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ತಿಪಟೂರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ಸೇರಿದಂತೆ ಇನ್ನಿತರರ ವಿರುದ್ಧ ವಿಚಾರಣೆಗೆ ಶಿಕ್ಷಣ ಇಲಾಖೆ ಪೂರ್ವಾನುಮತಿ ನೀಡಿದೆ.
2018-19 ಮತ್ತು 2019-20ನೇ ಸಾಲಿನಲ್ಲಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಂಜೂರು ಮಾಡಿರುವ ಅನುದಾನವನ್ನು ಅತಿಥಿ ಉಪನ್ಯಾಸಕರಲ್ಲದ ಅನರ್ಹ ವ್ಯಕ್ತಿಗಳ ಹೆಸರಲ್ಲಿ ಬಿಲ್ ಮಾಡಿ ಡ್ರಾ ಮಾಡಿರುವ ಆರೋಪಕ್ಕೆ ಪ್ರಾಂಶುಪಾಲ ಅಲ್ಲಮಪ್ರಭು, ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಸುನೀಲ್ ಕೂರ್ಗಿ ಎಂಬುವರ ವಿರುದ್ಧ ಎಸಿಬಿ ವಿಚಾರಣೆಗೆ ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಆರೋಪಿತ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ಮತ್ತು 2016 ಮಾರ್ಚ್ 14ರ ಸರ್ಕಾರದ ಆದೇಶದಂತೆ ಎಸಿಬಿ ವಿಚಾರಣೆಗೆ ಅನುಮತಿ ನೀಡಲಾಗಿದೆ.
ಓದಿ...ಗುಡಿಸಲುಗಳ ಮೇಲೆ ಎರಗಿದ ಕಾರು: ಓರ್ವನಿಗೆ ಗಾಯ, ಮತ್ತೋರ್ವನ ಸ್ಥಿತಿ ಗಂಭೀರ
2018-19 ಮತ್ತು 2019-20ನೇ ಸಾಲಿನಲ್ಲಿ ತಿಪಟೂರು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 27 ಉಪನ್ಯಾಸಕರು ನೇಮಕಗೊಂಡಿದ್ದರು. ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಗೆಂದು ಸರ್ಕಾರ ಒಟ್ಟು 5,85,000 ರೂ.ಗಳನ್ನು ಬಿಡುಗಡೆ ಮಾಡಿತ್ತು.
ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ಮತ್ತು ಪ್ರಥಮ ದರ್ಜೆ ಸಹಾಯಕ ಸುನೀಲ್ ಕೂರ್ಗಿ ಅರ್ಹ ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ ನೀಡಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.