ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಒಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಮಂಗಳಪದವು ಸಮೀಪದ ಬನಾರಿ ಬಾಬುಕಟ್ಟೆ ಎಂಬಲ್ಲಿ ಸಂಭವಿಸಿದೆ.
ತರಕಾರಿ ವ್ಯಾಪಾರ ನಡೆಸುತ್ತಿರುವ ಅಬ್ದುಲ್ಲ ಎಂಬುವರ ಮನೆಯ ಪಕ್ಕದ ಗುಡ್ಡ ಜೋರಾದ ಮಳೆಗೆ ಕುಸಿದು ಮನೆ ಮೇಲೆ ಉರುಳಿಬಿದ್ದಿದೆ. ಇದರಿಂದಾಗಿ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಘಟನೆಯಲ್ಲಿ ಕುಟುಂಬದ ಆರು ಮಂದಿ ಮನೆಯ ಅವಶೇಷದಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಸ್ಥಳೀಯರು ಆರು ಮಂದಿಯನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮನೆ ಯಜಮಾನ ಅಬ್ದುಲ್ಲ, ಪತ್ನಿ ಜೋಹಾರ, ಮಕ್ಕಳಾದ ಅರಫಾಝ್, ಇರ್ಪಾನ್, ತಸ್ಲೀಮಾ, ಮಿಶ್ರಿಯಾ ಗಾಯಗೊಂಡಿದ್ದು, ವಿಟ್ಲ ಹಾಗೂ ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.
ಬಂಟ್ವಾಳ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇನ್ನೂ ಹಲವೆಡೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ.