ಶಿವಮೊಗ್ಗ: ಸಿದ್ದರಾಮಯ್ಯರನ್ನ ನೀವು ಎಷ್ಟೇ ನಿಂದಿಸಿದರೂ ಸಹ ಜನಾಂಗದ ನಾಯಕರಾಗಲು ಸಾಧ್ಯವಿಲ್ಲವೆಂದು ಕೆಪಿಸಿಸಿ ವಕ್ತಾರ ಕೆ. ದಿವಾಕರ್ ಅವರು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶೀಸಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನ ಸಚಿವ ಕೆ.ಎಸ್ ಈಶ್ವರಪ್ಪ ವೈಯಕ್ತಿಕ ನಿಂದನೆ ಮಾಡುತ್ತಾ ಓಡಾಡುತ್ತಿದ್ದಾರೆ. ಇದನ್ನ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಸಚಿವರಾಗಿ ಹೀಗೆ ಮಾಡುವುದರಿಂದ ಜನಾಂಗದ ನಾಯಕರಾಗಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದರು. ಈಶ್ವರಪ್ಪ ತಮ್ಮ ರಾಜಕೀಯ ನಡೆಯನ್ನ ಬದಲಾಯಿಸಿಕೊಳ್ಳುವುದು ಒಳ್ಳೆಯದು. ಈಶ್ವರಪ್ಪ ನವರ ಬಗ್ಗೆ ರಾಜ್ಯಾದ್ಯಂತ ಟೀಕೆಗಳು ಹರಿದಾಡಿದರೆ ನಮಗೆ ನೋವಾಗಲಿದೆ. ಏಕೆಂದರೆ ಅದು ಅವರಿಗೆ ಮಾಡುವ ಟೀಕೆಗಳಲ್ಲ ನಮ್ಮ ಜಿಲ್ಲೆಯವರಿಗೆ ಮಾಡಿದ ಅವಮಾನವಾದಂತೆ ಎಂದರು.
ಇನ್ನು ರಾಜ್ಯದ ಹಲವು ಭಾಗದಲ್ಲಿ ನೆರೆ ಬಂದು ಜನರ ಪರಿಸ್ಥಿತಿ ಅತಂತ್ರವಾಗಿದೆ. ಆದರೆ, ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಹಣ ಕೂಡ ಬಿಡುಗಡೆಯಾಗಿಲ್ಲ. ಸಿಎಂ ಸೇರಿದಂತೆ ರಾಜ್ಯ ಬಿಜೆಪಿಯ ನಾಯಕರು ಹಣ ತರುವಲ್ಲಿ ವಿಫಲವಾಗಿದ್ದಾರೆ. ಪ್ರಧಾನಿ ಭೇಟಿ ಮಾಡಲು ಹೋಗಿ ಅವಕಾಶ ಸಿಗದೇ ಸಿಎಂ ಮರಳಿ ಬರುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ಕಡೆಗಣಿಸುತ್ತಿದೆ. ಅಲ್ಲದೇ, 40 ದಿನದೊಳಗೆ ರಾಜ್ಯದ 21 ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಲಾಯಿತು. ಇದು ಸಹ ರಾಜ್ಯದಲ್ಲಿ ನೆರೆ ನಿರ್ವಹಣೆ ವಿಫಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯಲಿ. ಕೇಂದ್ರ ಸರ್ಕಾರ ನೀಡುವುದು ಬಿಕ್ಷೆಯಲ್ಲ. ನಾವು ಪಾವತಿಸಿರುವ ತೆರಿಗೆ ಹಣ ಎಂದು ದಿವಾಕರ್ ಹೇಳಿದ್ದಾರೆ.