ಶಿವಮೊಗ್ಗ: ಪಾರಿವಾಳ ಎಲ್ಲೆ ಹಾರೋದ್ರೂ, ವಾಪಸ್ ಬಂದು ಕೂರೋದು ನಮ್ಮ ಹೆಗಲ ಮೇಲೆನೇ ಅಂತ ನಟ ಪುನೀತ್ ರಾಜ್ ಕುಮಾರ್ ಚಿತ್ರವೊಂದರಲ್ಲಿ ಡೈಲಾಗ್ ಹೇಳಿದ್ದರು. ಅದೇ ರೀತಿ ಪಾರಿವಾಳವೊಂದು ಪುನೀತ್ ರಾಜ್ ಕುಮಾರ್ ಅವರ ಫೋಟೋ ಪಕ್ಕದಲ್ಲಿ ಕುಳಿತು ಅಚ್ಚರಿ ಮೂಡಿಸಿದೆ.
ತಾಲೂಕಿನ ತ್ಯಾವರೆಕೊಪ್ಪ ಗ್ರಾಮದ ಲಕ್ಷ್ಮೀಪತಿ ಅವರು ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ. ಇವರು ತಮ್ಮ ಮನೆಯಲ್ಲಿ ನಿನ್ನೆ ನಟ ಅಪ್ಪು ಅವರ ಭಾವಚಿತ್ರವನ್ನಿಟ್ಟು ಅವರಿಗೆ ಇಷ್ಟವಾದ ಸಸ್ಯಾಹಾರ ಹಾಗೂ ಮಾಂಸಹಾರವನ್ನಿಟ್ಟು ಪೂಜೆ ಮಾಡಿದರು. ಪೂಜೆ ನಡೆಸುತ್ತಿದ್ದಂತೆಯೇ ಅವರ ಮನೆಯಲ್ಲಿ ಸಾಕಿದ ಪಾರಿವಾಳ ಪುನೀತ್ ಅವರ ಫೋಟೋದ ಪಕ್ಕದಲ್ಲಿ ಬಂದು ಕುಳಿತುಕೊಂಡಿದೆ.
ನಂತರ ಪಾರಿವಾಳವನ್ನು ಲಕ್ಷ್ಮೀಪತಿ ಎತ್ತಿಕೊಳ್ಳಲು ಹೋದಾಗ ಪಾರಿವಾಳ ಬಾರದೆ ಅಲ್ಲೇ ಕುಳಿತುಕೊಂಡಿದೆ. ಇದು ಅಲ್ಲಿದ್ದವರ ಅಚ್ಚರಿಗೆ ಕಾರಣವಾಗಿದೆ.