ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ಧ ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಕೆಲವು ಹಿಂದೂ ಸಂಘಟನೆಗಳು ಮುಂದಾಗಿವೆ ಎನ್ನಲಾಗ್ತಿದೆ. ಹಿಂದೂ ಸಂಘಟನೆಗಳ ಈ ನಿರ್ಧಾರ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆಯ ಮುಖಂಡರು ನಿರ್ಧಾರವನ್ನು ಸಮರ್ಥಿಸಿಕೊಂಡರೆ, ಇನ್ನೊಂದೆಡೆ, ಇದೊಂದು ಬಡ ವ್ಯಾಪಾರಿಗಳ ಬದುಕಿಗೆ ತೊಂದರೆ ತಂದೊಡ್ಡುವ ನಿರ್ಧಾರ ಎಂಬ ಮಾತುಗಳು ಕೇಳಿಬಂದಿವೆ.
ಜಾತ್ರೆಯ ಟೆಂಡರ್ ಪಡೆದ ಹಿಂದೂ ಕಾರ್ಯಕರ್ತ: ಮಾರಿಕಾಂಬ ಜಾತ್ರೆಯ ಮಳಿಗೆ ಹರಾಜು ಗುತ್ತಿಗೆಯನ್ನು ಮೊದಲು ಚಿಕ್ಕಣ್ಣ ಎಂಬಾತ 9 ಲಕ್ಷದ 1001 ರೂ. ಗೆ ಪಡೆದುಕೊಂಡಿದ್ದರು. ಆದರೆ, ದುಷ್ಕರ್ಮಿಗಳಿಂದ ತನಗೆ ಜೀವ ಬೆದರಿಕೆ ಇದೆ. ಈ ಟೆಂಡರ್ ತನಗೆ ಬೇಡ ಅಂತಾ ಚಿಕ್ಕಣ್ಣ ಮಾರಿಕಾಂಬ ಸೇವಾ ಸಮಿತಿಗೆ ಹೇಳಿದ್ದರು. ಹಾಗಾಗಿ ಈ ಗುತ್ತಿಗೆಯನ್ನು ಹಿಂದೂ ಸಂಘಟನೆಯ ನಾಗರಾಜ್ ಎಂಬವರು ಪಡೆದುಕೊಂಡಿದ್ದಾರೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಎಸ್ ಕೆ ಮರಿಯಪ್ಪ ಹೇಳಿದ್ದಾರೆ.
ನಾಗರಾಜ್ ಅವರು ಟೆಂಡರ್ ಹಣವನ್ನು ಸಮಿತಿಗೆ ನೀಡಿದ್ದಾರೆ. ಇದರಿಂದ ಈಗ ಜಾತ್ರೆಯ ಟೆಂಡರ್ ನಾಗರಾಜ್ ಅವರಿಗೆ ಸೇರಿದ್ದು, ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ಮಳಿಗೆ ಹಾಕಲು ಅವಕಾಶ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಇಲ್ಲ, ಕಲ್ಲಿದ್ದಲು ಕೊರತೆಯೂ ಇಲ್ಲ: ಸಚಿವ ಸುನೀಲ್ ಕುಮಾರ್