ಶಿವಮೊಗ್ಗ: ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲು, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರು ಜುಲೈ 7 ಮತ್ತು 8 ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ಚರಪ್ಪ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತು ರೈಲ್ವೆ ಚರ್ಚಿಸಲು ಸಚಿವರಾದ ಸುರೇಶ್ ಅಂಗಡಿ, ರಾಸಾಯನಿಕ ಖಾತೆ ಸಚಿವ ಸದಾನಂದ ಗೌಡ, ಮೂಲಭೂತ ಸೌಕರ್ಯ ಖಾತೆ ಸಚಿವ ಹರ್ದೀಪ್ ಸಿಂಗ್ ಹಾಗೂ ಆಯುಷ್ ಮಂತ್ರಿ ಶ್ರೀಪಾದ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಸುರೇಶ್ ಅಂಗಡಿರವರು ಜಿಲ್ಲೆಗೆ ಉನ್ನತ ಅಧಿಕಾರಿಗಳ ಜೊತೆ ಆಗಮಿಸಿ, ಇಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಇದರಿಂದ ಜಿಲ್ಲೆಯ ರೈಲ್ವೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಜಿಲ್ಲೆಯಲ್ಲಿ ಫಾರ್ಮ್ ಹಬ್ ಸ್ಥಾಪನೆಯಾದರೆ, ಬಿ ಫಾರ್ಮ್ ಮುಗಿಸಿದವರಿಗೆ ಉದ್ಯೋಗ ಲಭ್ಯವಾಗುತ್ತದೆ. ಯಡಿಯೂರಪ್ಪ ಕನಸು ವಿಮಾನ ನಿಲ್ದಾಣದ ಕುರಿತು ಕೇಂದ್ರ ಹರ್ದೀಪ್ ಸಿಂಗ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಆದಷ್ಟು ಬೇಗ ಈ ಕುರಿತು ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ಇನ್ನು, ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ಭಾರತೀಯ ಜನತಾ ಪಾರ್ಟಿ ಶರಾವತಿ ನೀರನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗುವುದನ್ನ ವಿರೋಧಿಸುತ್ತದೆ. ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದಕ್ಕೆ ನಾವು ಬಿಡೋದಿಲ್ಲ. ನೀರು ತೆಗೆದು ಕೊಂಡು ಹೋಗುವ ಕುರಿತು ಜಿಲ್ಲೆಯ ಜನ ಪ್ರತಿನಿಧಿಗಳ ಜೊತೆ ಚರ್ಚೆಯೇ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈತ್ರಿ ಸರ್ಕಾರದ ಮಂತ್ರಿಗಳಲ್ಲಿ ಹೊಂದಾಣಿಕೆಯೇ ಇಲ್ಲ. ಮಂತ್ರಿಗಳು ತಮಗೆ ಏನ್ ಬೇಕೋ ಅದನ್ನೆ ಹೇಳ್ತಾ ಇದ್ದಾರೆ. ಅದಕ್ಕೆ ಅವರ ಪಕ್ಷದವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.