ಶಿವಮೊಗ್ಗ : ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ನೀಗಿಸಲು ಪ್ರತಿ ತಾಲೂಕಿನಲ್ಲಿ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ 2ನೇ ಅಲೆ ಭೀಕರವಾಗಿದೆ. ಆಮ್ಲಜನಕದ ಕೊರತೆಯಿಂದಾಗಿ ಸಾವಿರಾರು ಸೋಂಕಿತರು ಮೃತರಾಗುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಇದೊಂದು ಸವಾಲಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕದ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಆಮ್ಲಜನಕ ಉತ್ಪಾದನಾ ಘಟಕವನ್ನು ಪುನರ್ ನಿರ್ಮಾಣ ಮಾಡಿಸಲು ಮುಂದಾಗಿದ್ದು, ಉತ್ಪಾದನೆ ಮಾಡಲು ಈಗಾಗಲೇ ಹಿಂದೆ ಉತ್ಪಾದಿಸುತ್ತಿದ್ದ ಕಂಪನಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾವು ಮಾತುಕತೆ ನಡೆಸಲಾಗಿದೆ.
150 ಕೆ.ಎಲ್.ಆಮ್ಲಜನಕ ಉತ್ಪಾದಿಸಲು ನಿರ್ಧರಿಸಿದ್ದು, ಇನ್ನೆರೆಡು ದಿನದಲ್ಲಿ ಉತ್ಪಾದನೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ಉತ್ಪಾದಿಸಿದ ಆಮ್ಲಜನಕವನ್ನು ಜಂಬೋ ಸಿಲಿಂಡರ್ಗೆ ತುಂಬಿಸಿ ವಿತರಣೆ ಮಾಡಲಿದೆ ಎಂದ ಅವರು, ಇದಕ್ಕೆ ಎಷ್ಟೇ ಖರ್ಚು ಬಂದರೂ ಸರ್ಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದ್ರು.
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಪ್ರತಿ ತಾಲೂಕಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಕೊರತೆಯಾಗದಂತೆ ಸೂಚನೆ ನೀಡಿದ್ದಾರೆ.
ರಾಜ್ಯದ 4 ಕಡೆ ಪ್ರಕೃತಿದತ್ತ ಆಮ್ಲಜನಕ ಶೇಖರಣಾ ಘಟಕ ಸ್ಥಾಪಿಸಲು ಮಂಜೂರಾಗಿದ್ದು, ಶಿಕಾರಿಪುರದಲ್ಲೂ ಸಹ ಈ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ದೇಶದಲ್ಲೂ 3ನೇ, 4ನೇ ಅಲೆ ಕಾಣಿಸಿಕೊಳ್ಳುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಪ್ರತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲು ಚಿಂತಿಸಲಾಗಿದೆ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಔಷಧಿ ಬೇಕಾದವರೂ ಮಾತ್ರ ಹೊರಗೆ ಬಂದು ಔಷಧಿ ಖರೀದಿಸಬೇಕೆ ಹೊರತು ಮನೆಯಿಂದ ಯಾರೂ ಹೊರಗೆ ಬರದೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ಎಸ್.ಜ್ಞಾನೇಶ್ವರ್, ಜಗದೀಶ್, ಕೆ.ಎಲ್.ಅಣ್ಣಪ್ಪ ಉಪಸ್ಥಿತರಿದ್ದರು.