ಶಿವಮೊಗ್ಗ: ಮನೆಗೆ ಹೊರಟಿದ್ದ ವ್ಯಕ್ತಿಯ ಮೇಲೆ ಬೈಕ್ನಲ್ಲಿ ಬಂದಿದ್ದ ಮೂವರು ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಭರ್ಮಪ್ಪ ನಗರದಲ್ಲಿ ನಡೆದಿದೆ. ಭರ್ಮಪ್ಪ ನಗರದ ನಿವಾಸಿ ಪ್ರಕಾಶ್(30) ಎಂಬಾತನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕಾಶ್ ಭರ್ಮಪ್ಪ ನಗರದ ನಿವಾಸಿಯಾಗಿದ್ದು, ನಿನ್ನೆ ರಾತ್ರಿ ತನ್ನ ಸ್ನೇಹಿತರ ಜೊತೆ ಬಸ್ ಸ್ಟಾಂಡ್ ಹೋಗಿ ವಾಪಸ್ ಆಟೋದಲ್ಲಿ ಬಂದಿದ್ದಾರೆ. ಸ್ನೇಹಿತರು ಪ್ರಕಾಶ್ನನ್ನು ಬಿಟ್ಟು ವಾಪಸ್ ಹೋಗುತ್ತಿದ್ದಂತಯೇ ಬೈಕ್ನಲ್ಲಿ ಬಂದ ಮೂವರು ಏಕಾಏಕಿ ಪ್ರಕಾಶ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಪ್ರಕಾಶ್ರವರ ತಲೆ, ಮುಖ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಗಾಯವಾಗಿದೆ. ಇದೇ ವೇಳೆ, ತಕ್ಷಣ ಕೆಳಗೆ ಬಿದ್ದ ಪ್ರಕಾಶ್ನನ್ನು ಮೂವರು ಕಾಲಿನಲ್ಲಿ ತುಳಿದು ಹಾಕಿದ್ದಾರೆ. ಅವರಿಂದ ತಪ್ಪಿಸಿಕೊಂಡ ಪ್ರಕಾಶ್ ಮನೆಗೆ ಓಡಿದ್ದಾನೆ. ಮನೆಯವರು ಪ್ರಕಾಶನ ಕೂಗಾಟ ಕೇಳಿ ಬಾಗಿಲು ತೆಗೆದು ನೋಡಿ ತಕ್ಷಣ ಒಳಗೆ ಕರೆದು ಕೊಂಡಿದ್ದಾರೆ. ಅಷ್ಟರಲ್ಲಿ ಬೈಕ್ನಲ್ಲಿ ಬಂದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನನಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ: ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ, ಪಥ ಸಂಚಲನವನ್ನು ನೋಡಲು ಹೋಗಿದ್ದು ಬಿಟ್ಟರೆ, ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಮನೆಯ ಬಳಿಯೇ ಕುಲುಮೆ ಕೆಲಸ ಮಾಡಿಕೊಂಡು ಇದ್ದವನು. ನನಗೆ ಅವರು ಯಾಕೆ ಹಲ್ಲೆ ನಡೆಸಿದರು ಅಂತ ಗೊತ್ತಿಲ್ಲ ಎಂದು ಹಲ್ಲೆಗೆ ಒಳಗಾದ ಪ್ರಕಾಶ್ ಹಾಗೂ ಆತನ ತಾಯಿ ರಾಧಾ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ: ನಿನ್ನೆ ರಾತ್ರಿ ಹಲ್ಲೆ ನಡೆಸಿದವರು ಭರ್ಮಪ್ಪನಗರ, ಸಿಗೇಹಟ್ಟಿ ಭಾಗದಲ್ಲಿ ಕೂಗಾಡಿ ಓಡಾಡಿದ್ದಾರೆ. ಇದರಿಂದ ಈ ಭಾಗದ ಯುವಕರು ಇವರನ್ನು ಹುಡುಕುವ ಪ್ರಯತ್ನ ಮಾಡಿದರೂ ಸಹ ಅದು ಸಾಧ್ಯವಾಗಿಲ್ಲ. ಸ್ಥಳಕ್ಕೆ ಎಸ್ಪಿ ಮಿಥುನ್ ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಇಲಾಖೆಯವರು ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ : ಹರ್ಷ ಹತ್ಯೆ ಆರೋಪಿಗಳಿಂದ ಜೈಲಿನಿಂದಲೇ ವಿಡಿಯೋ ಕರೆ: ಎಫ್ಐಆರ್ ದಾಖಲು