ಶಿವಮೊಗ್ಗ : ಗ್ರಾಮ ಸ್ವರಾಜ್ಯ ಕಲ್ಪನೆಯಡಿ ಕೆರೆಗಳ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸನಗರ ತಾಲೂಕಿನಲ್ಲಿ ಮಳೆಗಾಲದಲ್ಲಿ ಸಾಕಷ್ಟು ಮಳೆಯಾಗುತ್ತದೆ. ಆದರೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಇದರಿಂದ ತಾಲೂಕಿನ ದೊಂಬೆಕೊಪ್ಪದ ಸಾರಾ ಸಂಸ್ಥೆ ಹಾಗೂ ಕೆ.ವಿ.ಸುಬ್ಬಣ್ಣ ರಂಗ ಸಮೂಹದವರು ತಮ್ಮೂರಿನ ಸುತ್ತಮುತ್ತ ಏನಾದರೂ ಮಾಡಬೇಕು ಎಂದು, ಮುತ್ತಲ ಗ್ರಾಮಸ್ಥರ ಸಹಕಾರದಿಂದ ಕೆರೆಯ ಹೂಳನ್ನು ಮೇಲೆತ್ತಿದ್ದಾರೆ.
ಸುಮಾರು ಎರಡು ಎಕರೆಯಷ್ಟು ದೊಡ್ಡದಾದ ಕೆರೆಯಿಂದ, ಜೆಸಿಬಿ ಯಂತ್ರದ ಸಹಾಯದಿಂದ ಹೂಳೆತ್ತಿ, ಅದೇ ಮಣ್ಣಿನಿಂದ ಸುತ್ತ ದಂಡೆ ಮಾಡಿದ್ದಾರೆ. ಇದಕ್ಕೆ ಮುತ್ತಲ ಗ್ರಾಮಸ್ಥರು, ಮೂಲಗದ್ದೆ ಮಠದ ಸ್ವಾಮಿಜೀಗಳು ಸಹಕಾರ ನೀಡಿದ್ದಾರೆ. ಕೆರೆಯ ಕಾಮಗಾರಿಯನ್ನು ಕೇವಲ 2.50 ಲಕ್ಷ ರೂ. ನಲ್ಲಿ ಮಾಡಿ ಮುಗಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ, ಸಿಇಓ ಶ್ರೀಮತಿ ವೈಶಾಲಿ ಸೇರಿದಂತೆ ಕೆರೆ ಅಭಿವೃದ್ದಿ ಸಮಿತಿಯ ಸದಸ್ಯರು ಹಾಜರಿದ್ದರು.