ಶಿವಮೊಗ್ಗ: ಕನ್ನಡ ಸಾಹಿತ್ಯಲೋಕದ ಮೊದಲ ಕವಿಯತ್ರಿ, ವಚನಗಾರ್ತಿ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಕೋಟೆಯಲ್ಲಿ ಕಸಪಯ್ಯ ನಾಯಕನ ಶಾಸನ ಪತ್ತೆಯಾಗಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಶೇಜೇಶ್ವರ ಕ್ಷೇತ್ರ ಕಾರ್ಯಗೊಂಡಾಗ 12ನೇ ಶತಮಾನದ ಶಾಸನ ದೊರೆತಿದೆ.
![shivmogga](https://etvbharatimages.akamaized.net/etvbharat/prod-images/kn-smg-02-udutadi-kasapayya-7204213_12122020164557_1212f_1607771757_1014.jpg)
ಉಡುತಡಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ವೇಳೆ ಕೋಟೆಯ ಪೂರ್ವಭಾಗದ ಬಲ ಬುರುಜಿನ ಹತ್ತಿರ ಬಿಜ್ಜಳ ಅರಸನ ದಂಡನಾಯಕ ಕಸಪಯ್ಯ ನಾಯಕನ ತೃಟಿತವಾಗಿರುವುದು ಕಂಡು ಬರುತ್ತದೆ. ಈ ವೇಳೆ ಗಜಲಕ್ಷ್ಮಿ ಪಟ್ಟಿಕೆ, ಮಡಿಕೆ ಹಾಗೂ ಹೆಂಚುಗಳ ಚೂರುಗಳು ದೂರಕಿವೆ.
![shivmogga](https://etvbharatimages.akamaized.net/etvbharat/prod-images/kn-smg-02-udutadi-kasapayya-7204213_12122020164557_1212f_1607771757_674.jpg)
ಶಾಸನದ ಮಹತ್ವವೇನು?
ಶಾಸನದಲ್ಲಿ 17 ಸಾಲುಗಳು ಕಂಡು ಬಂದಿದೆ. ಇದರಲ್ಲಿ ಕಲಚೂರಿ ಬಿಜ್ಜಳ ಅರಸನ ಮಹಾದಂಡನಾಯಕ ಕಸಪಯ್ಯ ನಾಯಕನಿದ್ದ. ಈತ ಬಲ್ಲೇಶ್ವರ ದೇವರ ಆರಾಧಕನಾಗಿದ್ದನು. ಬ್ರಹ್ಮಪುರಿಗೆ ಅಂದರೆ ಬ್ರಾಹ್ಮಣರ ಅಗ್ರಹಾರಕ್ಕೆ 8 ಗದ್ಯಾಣ ನಾಣ್ಯಗಳನ್ನು ದಾನ ನೀಡಿರುವುದು ತಿಳಿದು ಬರುತ್ತದೆ. ಈ ಶಾಸನವು ಕ್ರಿ.ಶ.1150 -68 ರ ಅವಧಿಯ ಕಲಚೂರಿ ಬಿಜ್ಜಳ ಅರಸನ ಕಾಲದ್ದಾಗಿದೆ. ಇದರಲ್ಲಿ ದಂಡನಾಯಕ ಕಸಪಯ್ಯ ನಾಯಕನ ಉಲ್ಲೇಖವಿದೆ.
ಓದಿ: ಯಶಸ್ವಿಯಾಗಿ ನಡೆದ ರ್ಯಾಲಿ ಆಫ್ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ ಸ್ಪರ್ಧೆ
ಕಸಪಯ್ಯನ ಇತಿಹಾಸ:
ಕಸಪಯ್ಯ ಕ್ರಿ.ಶ.1150-68 ರ ಅವಧಿಯಲ್ಲಿ ಬಿಜ್ಜಳ ಅರಸನ ದಂಡನಾಯಕನಾಗಿದ್ದನು. ಈತನು ಬನವಾಸಿ 12,000 ನಾಡಿನ ಮಹಾದಂಡನಾಯಕನಾಗಿ ಬಳ್ಳಿಗಾವಿಯನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಈ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಹಿಂದೊಮ್ಮೆ ಕಸಪಯ್ಯ ನಾಯಕ ಅಕ್ಕಮಹಾದೇವಿಯ ಪತಿ ಕೌಶಿಕ ಮಹಾರಾಜ ಇರಬಹುದೆಂಬ ಅಭಿಪ್ರಾಯವನ್ನು ಸಂಶೋಧಕರಾದ ದೇವರಕೊಂಡ ರೆಡ್ಡಿ ಹಾಗೂ ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಕೋಟೆಯಲ್ಲಿಯೇ ಕಸಪಯ್ಯ ನಾಯಕನ ಶಾಸನ ದೊರೆತಿರುವುದರಿಂದ ಇವರೇ ಕೌಶಿಕ ಮಹಾರಾಜ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಈ ಶಾಸನದಿಂದ ದೊರೆತಿದೆ. ಇದು ಅಕ್ಕಾಮಹಾದೇವಿ ಜನ್ಮಸ್ಥಳಕ್ಕೆ ಐತಿಹಾಸಿಕ ಮಹತ್ವದಾಗಿದೆ ಎಂದು ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ ಹೇಳಿದ್ದಾರೆ.
ಈ ವೇಳೆ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಜಿ.ಪೂರ್ಣಿಮಾ, ರಮೇಶ್ ಹೀರೆಜಂಬೂರು, ಬಿಚ್ಚುಗತ್ತಿ ಶ್ರೀಪಾದ್ ಹಾಗು ಮಂಜುನಾಥ್ ಹೆಗಡೆ ಹಾಜರಿದ್ದರು.