ಶಿವಮೊಗ್ಗ: ಚುನಾವಣೆ ಅಂದ್ರೆ ಕಾಂಗ್ರೆಸ್ ಕಾರ್ಯಕರ್ತರು ಹಿಂದೆ-ಮುಂದೆ ನೋಡಬೇಕು ಹಾಗೆ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಪರಿಷತ್ ಅಭ್ಯರ್ಥಿ ಡಿ.ಎಸ್.ಅರುಣ್ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 551 ಸದಸ್ಯರಲ್ಲಿ 393 ಸದಸ್ಯರು ಬಿಜೆಪಿಯವರು ಇದ್ದಾರೆ. ಈಗಾಗಲೇ ಪ್ರಚಾರ ನಡೆಸಿದ್ದೇವೆ. ಭದ್ರಾವತಿ ಬಿಟ್ಟು ಉಳಿದ ಕ್ಷೇತ್ರಗಳ ಪ್ರವಾಸ ಮಾಡುತ್ತೇನೆ. ಪ್ರಥಮ ಪ್ರಾಸತ್ತ್ಯದ ಮತವನ್ನು ಬಿಜೆಪಿಗೆ ನೀಡಿ ಗೆಲ್ಲಿಸಿ ಎಂದರು.
ವೇದಿಕೆ ಮೇಲೆ ಇರುವ ಮುಖಂಡರು ಚುನಾವಣೆಯಲ್ಲಿ ಓಡಾಡಿದರಷ್ಟೇ ಸಾಕಾಗಲ್ಲ. ನಿಮ್ಮನ್ನು ಗೆಲ್ಲಿಸಲು ನಿಮ್ಮ ಗ್ರಾಮದ ಮುಖಂಡರು ಸಾಕಷ್ಟು ಓಡಾಡಿದ್ದಾರೆ. ಬೇರೆಯವರು ಕಾಂಗ್ರೆಸ್ ಅಂತಾ ಯೋಚಿಸುತ್ತಿದ್ದರೆ, ಅವರನ್ನು ಸೆಳೆಯುವ ಯತ್ನ ಮಾಡಬೇಕು. ಪಕ್ಷದ ಚಿಹ್ನೆ ಇರುವುದಿಲ್ಲ, ಹೆಸರು ಮಾತ್ರ ಇರುತ್ತದೆ. ಕಾಂಗ್ರೆಸ್ ಸ್ನೇಹಿತರು ನಮ್ಮ ಜನ ಬೆಂಬಲ ನೋಡಿ ದಿಗ್ಬ್ರಮೆಗೊಂಡಿದ್ದಾರೆ.
ಇದು ಕೇವಲ ಶಿವಮೊಗ್ಗದಲ್ಲಿ ಮಾತ್ರವಲ್ಲ, ನಾವು ಸ್ಪರ್ಧೆ ಮಾಡಿದ ಎಲ್ಲಾ ಕಡೆ ಇದೇ ವಾತಾವರಣ ಇದೆ. ಇದರಿಂದ ಮೇಲ್ಮನೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗುತ್ತದೆ. ಶೇ.60ರಷ್ಟು ಮಹಿಳೆಯರೇ ಗೆದ್ದಿದ್ದಾರೆ. ನಿಮ್ಮ ಕೆಲಸವನ್ನು ಗಮನಿಸುತ್ತಾರೆ. ನಿಮ್ಮನ್ನು ಗೆಲ್ಲಿಸಿದವರ ಋಣ ತೀರಿಸುವ ಅವಕಾಶವಿದೆ, ಬಳಸಿಕೊಳ್ಳಿ ಎಂದರು.
ಒಂದು ಕಾಲ ಇತ್ತು, ಕಾಂಗ್ರೆಸ್ನವರು ನಾಮಪತ್ರ ಸಲ್ಲಿಸಿದರೆ ಸಾಕು ಗೆಲ್ಲುತ್ತಾರೆ ಎಂಬಂತೆ ಇತ್ತು. ಆದರೆ, ಈಗ ಆ ಕಾಲ ಇಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ಇದೆ. ಅಟಲ್ ಬಿಹಾರಿ ವಾಜಪೇಯಿ ನಂತರ ಉತ್ತಮ ನಾಯಕ ಅಂದ್ರೆ ಮೋದಿ ಅವರು. ಇಂತಹ ಹೆಮ್ಮೆಯ ನಾಯಕರು ಇರುವ ಪಕ್ಷದ ಸದಸ್ಯರು ನಾವು ಎಂಬುದೇ ನಮಗೆ ಹೆಮ್ಮೆಯಾಗಿದೆ. ಈ ಚುನಾವಣೆ ಮುಂಬರುವ ತಾಪಂ, ಜಿಪಂಗೆ ಸಹಕಾರಿಯಾಗುತ್ತದೆ ಎಂದರು.
ಇದೆ ವೇಳೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಇದರಿಂದ ನಮ್ಮ ಪಕ್ಷದ ಬಲವರ್ಧನೆ ಆಗುತ್ತದೆ ಎಂದರು. ಪ್ರಚಾರ ಸಭೆಯಲ್ಲಿ ಸಂಸದ ರಾಘವೇಂದ್ರ, ಅಭ್ಯರ್ಥಿ ಡಿ.ಎಸ್.ಅರುಣ್ ಸೇರಿದಂತೆ ಇತರರಿದ್ದರು.