ಶಿವಮೊಗ್ಗ: ಆದಾಯ ತೆರಿಗೆಯ ಅಧಿಕಾರಿಗಳೆಂದು ಸುಳ್ಳು ಹೇಳಿ ವ್ಯಕ್ತಿಯೊಬ್ಬರ ಬಳಿ 2.30 ಲಕ್ಷ ರೂ. ದೋಚಿರುವ ಘಟನೆ ಜಿಲ್ಲೆಯ ಸಾಗರದ ಜನ್ನೆಹಕ್ಕಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಶ್ವನಾಥ್ ಆ್ಯಂಡ್ರಾಯ್ಡ್ ಡೆವಲಪರ್ ಆಗಿದ್ದು, ಇವರು ಆನ್ಲೈನ್ ಬ್ಯಾಂಕಿಂಗ್ನಲ್ಲಿ ಹೆಚ್ಚು ವ್ಯವಹಾರ ನಡೆಸುತ್ತಾರೆ. ಇದನ್ನು ಕಂಡ ನಾಲ್ವರು ಖದೀಮರು ವಿಶ್ವನಾಥ್ ಅವರ ಮನೆಗೆ ಬೆಳ್ಳಂಬೆಳಗ್ಗೆ ಹೋಗಿ ದಾಳಿ ಮಾಡಿ, ಮನೆಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ನಂತರ ವಿಶ್ವನಾಥ್ ಹಾಗೂ ಅವರ ಸಹೋದರ ವಿನಯ್ ಕುಮಾರ್ ಅವರನ್ನು, ಶಿರಸಿಯ ಸಿದ್ಧಾಪುರದ SBI ಬ್ಯಾಂಕ್ಗೆ ಕರೆದುಕೊಂಡು ಹೋಗಿ, ಅಲ್ಲಿ 50 ಸಾವಿರ ರೂ. ಡ್ರಾ ಮಾಡಿಸಿದ್ದಾರೆ. ನಂತರ ವಿನಯ್ ಕುಮಾರ್ ಖಾತೆಯಿಂದ 1.40 ಲಕ್ಷ ರೂ.ಗಳನ್ನು ಪಡೆದು, ಮತ್ತೆ ಎಟಿಎಂನಲ್ಲಿ 40 ಸಾವಿರ ರೂಪಾಯಿ ಡ್ರಾ ಮಾಡಿಸಿಕೊಂಡಿದ್ದಾರೆ.
ಬಳಿಕ ಮನೆಗೆ ಬಂದು ಬಿಟ್ಟು ಎರಡು ಖಾಲಿ ಪೇಪರ್ ಮೇಲೆ ಹಾಗೂ ಒಂದು ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ತಾವು ಹೇಳಿದಾಗ ತನಿಖೆಗೆ ಬರಬೇಕಾಗುತ್ತದೆ ಎಂದು ಹೇಳಿ ವಾಪಸ್ ಹೋಗಿದ್ದಾರೆ.
ಈ ಕುರಿತು ವಿಶ್ವನಾಥ್ಗೆ ಅನುಮಾನ ಬಂದು ವಕೀಲರನ್ನು ವಿಚಾರಿಸಿದಾಗ, ತಮ್ಮ ಮನೆಗೆ ಬಂದಿದ್ದು ನಕಲಿ ಆದಾಯ ತೆರಿಗೆ ಅಧಿಕಾರಿಗಳು ಅನ್ನೋದು ಗೊತ್ತಾಗಿದೆ. ತಕ್ಷಣ ವಿಶ್ವನಾಥ್ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.
ನಕಲಿ ಐಟಿ ಅಧಿಕಾರಿಯ ವೇಷಧಾರಿಗಳು ಭದ್ರಾವತಿ ಮೂಲದವರು ಎಂದು ತಿಳಿದು ಬಂದಿದೆ. ಇದರಲ್ಲಿ ಓರ್ವ ಬಿಜೆಪಿಯ ಮುಖಂಡ ಎನ್ನಲಾಗುತ್ತಿದೆ. ಆದರೆ ಸಾಗರ ಪೊಲೀಸರು ಇನ್ನೂ ತನಿಖೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.