ಶಿವಮೊಗ್ಗ: ಕುರುಬರ ಸಂಘದ ರಾಜ್ಯ ನಿರ್ದೇಶಕರ ಹುದ್ದೆಗೆ ದುರ್ಗಿಗುಡಿಯ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚುನಾವಣೆ ನಡೆಯಿತು.
ಎಲ್ಲವೂ ಸರಿಯಾಗಿ ಇದ್ದಿದ್ದರೆ 2019ರ ಡಿಸೆಂಬರ್ 22ಕ್ಕೆ ರಾಜ್ಯ ನಿರ್ದೇಶಕರ ಹುದ್ದೆಗೆ ಮತದಾನ ನಡೆಯಬೇಕಿತ್ತು. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಬೀದರ್ ಜಿಲ್ಲೆಯ ಮತ ಪತ್ರಗಳು ಶಿವಮೊಗ್ಗ ಮತಗಟ್ಟೆಯಲ್ಲಿ ಕಾಣಿಸಿಕೊಂಡವು. ಇದರ ಪರಿಣಾಮವಾಗಿ ಗಲಾಟೆ ಗದ್ದಲಗಳ ನಂತರ ಚುನಾವಣಾ ಅಧಿಕಾರಿಗಳು ಮತದಾನವನ್ನು ಮುಂದೂಡಿದ್ದರು. ಹೀಗಾಗಿ, ನಿನ್ನೆ (ಭಾನುವಾರ) ಕುರುಬರ ಸಂಘದ ಚುನಾವಣೆಯು ದುರ್ಗಿಗುಡಿಯ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಂತಿಯುತವಾಗಿ ನಡೆಯಿತು.
ಜಿಲ್ಲೆಯಲ್ಲಿ ಒಟ್ಟು 6,000 ಮತದಾರಿದ್ದು, ದುರ್ಗಿಗುಡಿ ಶಾಲೆಯ 9 ಬೂತ್ಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ನಿರ್ದೇಶಕರ ಸ್ಥಾನಕ್ಕೆ ನಾಲ್ಕು ಜನರಿಗೆ ಆದ್ಯತೆಯಿದ್ದು, ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿ ಮತಪೆಟ್ಟಿಗೆ ಸೇರಿದೆ.