ಶಿವಮೊಗ್ಗ: ಗುತ್ತಿಗೆ ಕಾರ್ಮಿಕನೊಬ್ಬ ಹಠಾತ್ ಸಾವನ್ನಪ್ಪಿದ ಘಟನೆ ಭದ್ರಾವತಿಯ ವಿಐಎಸ್ಎಲ್ನಲ್ಲಿ ನಡೆದಿದೆ.
ಅಂಥೋಣಿ ರಾಜ್ (45) ಮೃತ ಕಾರ್ಮಿಕ. ಇಂದು ಕಾರ್ಖಾನೆಯ ಒಳಗೆ ಕಬ್ಬಿಣ ಸಾಗಿಸುತ್ತಿರುವಾಗ ಹೃದಯಘಾತವಾಗಿತ್ತು . ತಕ್ಷಣ ಇತರೆ ಕಾರ್ಮಿಕರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಈ ವೇಳೆ ಯಾವುದೇ ವಾಹನ ಲಭ್ಯವಾಗಲಿಲ್ಲ. ಅಷ್ಟರಲ್ಲಿಯೇ ಅಂಥೋಣಿ ರಾಜ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು.

ನಂತರ ಸ್ಥಳಕ್ಕೆ ಬಂದ ಶಾಸಕ ಸಂಗಮೇಶ್, ವಿಐಎಸ್ಎಲ್ ಆಡಳಿತ ಮಂಡಳಿಯ ಜೊತೆ ಮಾತನಾಡಿ, ಗುತ್ತಿಗೆದಾರನಿಂದ ಮೃತ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ವಿಐಎಸ್ಎಲ್ನ ಟೌನ್ಶಿಪ್ನಲ್ಲಿ ಕುಟುಂಬದ ಇಬ್ಬರಿಗೆ ಕೆಲಸ ನೀಡುವ ಭರವಸೆ ನೀಡಲಾಯಿತು. ಇದರಿಂದ ಅಂಥೋಣಿ ರಾಜ್ ಕುಟುಂಬಸ್ಥರು ಪ್ರತಿಭಟನೆ ಕೈ ಬಿಟ್ಟು ಶವವನ್ನು ತೆಗೆದುಕೊಂಡು ಹೋಗಿದ್ದಾರೆ.