ಶಿವಮೊಗ್ಗ: ಭದ್ರಾವತಿಯ ಜೀವನಾಡಿಯಾದಂತಹ ಮೈಸೂರು ಪೇಪರ್ ಮಿಲ್ ಮುಳುಗಿದೆ ಎನ್ನುವಷ್ಟರಲ್ಲಿ ಸಿಎಂ ಯಡಿಯೂರಪ್ಪ ಎಂಪಿಎಂ ಕಾರ್ಯಾರಂಭಕ್ಕೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಇದು ಕಾರ್ಖಾನೆ ಕಾರ್ಮಿಕರಲ್ಲಿ ಹೊಸ ಬೆಳಕು ಬಂದಂತೆ ಆಗಿದೆ.
ಸಂಸದ ಬಿ.ವೈ.ರಾಘವೇಂದ್ರ, ಅರಣ್ಯ ಹಾಗೂ ಕೈಗಾರಿಕಾ ಇಲಾಖೆ ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳ ಜೊತೆ ಸಿಎಂ ಎಂಪಿಎಂ ಕಾರ್ಯಾರಂಭ ಸಂಬಂಧ ಸಭೆ ನಡೆಸಿದ್ದರು.
ಭದ್ರಾವತಿಯ ಎಂಪಿಎಂ ಕಾರ್ಖಾನೆ ಕಾರ್ಯಾರಂಭಕ್ಕೆ ಸರ್ಕಾರ ನಿರ್ಧಾರ
ಎಂಪಿಎಂ ಕಾರ್ಖಾನೆಯ ನೂರಾರು ಕಾರ್ಮಿಕರಿಗೆ ಇದರಿಂದ ಹೋದ ಜೀವ ಬಂದಂತೆ ಆಗಿದೆ. ಈಗಾಗಲೇ ಹಲವಾರು ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದು ಕೊಂಡಿದ್ದಾರೆ. ಅಲ್ಲದೇ ಕಾರ್ಖಾನೆಯ ಮಿಷನ್ಗಳು ತುಕ್ಕು ಹಿಡಿಯುವಂತಾಗಿದೆ. ಕಾರ್ಖಾನೆಯು ಈಗಾಗಲೇ ಸ್ಥಗಿತವಾಗಿದೆ. ಇದರಿಂದ ಕಾರ್ಮಿಕರು ಬೀದಿ ಪಾಲಾಗುವ ಭಯದಲ್ಲಿದ್ದರು. ಅಲ್ಲದೇ, ಇಲ್ಲಿನ ಬ್ಯಾಕ್ ಲಾಗ್ ಕಾರ್ಮಿಕರಿಗೂ ಸಹ ಭಯ ಆವರಿಸಿತ್ತು. ಈ ಕುರಿತುಈಟಿವಿ ಭಾರತ್ ಜೂನ್ 6 ರಂದು ''ಭದ್ರಾವತಿ ಎಂಪಿಎಂ ಕಾರ್ಖಾನೆ ಕಾರ್ಯಾರಂಭಕ್ಕೆ ಸರ್ಕಾರ ನಿರ್ಧಾರ'' ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ವರದಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸಭೆ ನಡೆಸಿ, ಕಾರ್ಖಾನೆ ಕಾರ್ಯಾರಂಭ ಮಾಡುವ ಸಲುವಾಗಿ ಅದಕ್ಕೆ ಬೇಕಾದ ಹಣ ಸೇರಿದಂತೆ ಇತರ ಅಂಶಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದರಿಂದ ಕಾರ್ಮಿಕರಿಗೆ ಹೊಸ ಚೈತನ್ಯ ಬಂದಂತಾಗಿದೆ. ಈ ಕುರಿತು ವರದಿ ಪ್ರಸಾರ ಮಾಡಿದ ಈ ಟಿವಿ ಭಾರತ್ಗೆ ಮೈಸೂರು ಪೇಪರ್ ಮಿಲ್ನ ಕಾರ್ಮಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಕಾರ್ಮಿಕರ ಹೋರಾಟಕ್ಕೆ ಮಾನವ ಹಕ್ಕುಗಳ ಹೋರಾಟ ಸಮಿತಿ ಬೆಂಬಲ ನೀಡಿತ್ತು. ಯಡಿಯೂರಪ್ಪ ಹಿಂದೆ ಕಾರ್ಖಾನೆ ಉಳಿಸುವುದಾಗಿ ಹೇಳಿದ್ದರು. ಈಗ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಮಾತಿನಂತೆ ಕಾರ್ಖಾನೆ ಪುನಾರಂಭ ಮಾಡದೇ ಹೋದರೆ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.