ಶಿವಮೊಗ್ಗ: ಕಾಯಲು ಮೇಲೊಬ್ಬ ಇರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದೇಕೆ ಎಂದು ಹೇಳುವ ಮೂಲಕ ಯತ್ನಾಳ್ ಹೇಳಿಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗಳು ಸದ್ಯದಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ಹಾಗಾಗಿ ರಾಜ್ಯಾಧ್ಯಕ್ಷರಾಗಿರುವ ಕಟೀಲ್ ಜಿ ಅವರು ಮಸ್ಕಿ ವಿಧಾನಸಭಾ ಉಪಚುನಾವಣೆ ಜವಾಬ್ದಾರಿ ನೀಡಿದ್ದಾರೆ. ಅದರಂತೆ ಕಳೆದ ಉಪಚುನಾವಣೆಗಳಲ್ಲಿ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನು ಭಾರತೀಯ ಜನತಾ ಪಕ್ಷ ಗೆದ್ದಿತ್ತು. ಈ ಬಾರಿಯ ಬೆಳಗಾವಿ ಲೋಕಸಭಾ ಉಪಚುನಾವಣೆ ಸೇರಿ 2 ವಿಧಾನಸಭಾ ಉಪಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುವ ಮೂಲಕ ಯಡಿಯೂರಪ್ಪ ಕೈ ಬಲ ಪಡಿಸುತ್ತಾರೆ ಎಂದು ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಂತರ ವಿಜಯೇಂದ್ರ ಅವರ ಕುರಿತು ಯತ್ನಾಳ್ ನೀಡಿರುವ ಹಾವು, ಚೇಳು ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಯತ್ನಾಳ್ ಅವರು ಹಾವು, ಚೇಳು ಎಂದು ಉಲ್ಲೇಖ ಮಾಡಿರುವುದು ರಾಜಕೀಯ ವಿರೋಧಿಗಳಿಗೆ, ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದೇಕೆ ಎಂಬ ಡಿವಿಜಿಯವರ ಕಗ್ಗ ಹೇಳುವ ಮೂಲಕ ಯತ್ನಾಳ್ ಹೇಳಿಕೆಗೆ ಟಾಂಗ್ ನೀಡಿದರು.
ಓದಿ: ಫೆ.21 ಕ್ಕೆ ಶಿವಮೊಗ್ಗಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭೇಟಿ: ಸಂಸದ ರಾಘವೇಂದ್ರ
ಮಾಜಿ ಸಿಎಂ ಕುಮಾರಸ್ವಾಮಿ ಅವರ ರಾಮಮಂದಿರಕ್ಕೆ ದೇಣಿಗೆ ನೀಡದವರ ಮನೆಗಳನ್ನು ಆರ್ಎಸ್ಎಸ್ನವರು ಗುರುತು ಮಾಡುತ್ತಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದೆರಡು ವರ್ಷಗಳಿಂದ ರಾಜ್ಯದ ಜನ ಕುಮಾರಸ್ವಾಮಿ ಅವರನ್ನು ರಾಜಕೀಯದಲ್ಲಿ ಮರೆತು ಹೋಗಿದ್ದಾರೆ. ಹಾಗಾಗಿ ನೆನಪು ಮಾಡಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿರಬೇಕು. ಹಾಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲ್ಲ ಎಂದರು.
ನಂತರ ಸರ್ಕಾರದ ವರ್ಗಾವಣೆಗಳಲ್ಲಿ ವಿಜೇಯೆಂದ್ರ ಅವರ ಪಾತ್ರ ಇದೆ ಎನ್ನುವ ರಾಜಕೀಯ ನಾಯಕರ ಹೇಳಿಕೆ ಕುರಿತು ಮಾತನಾಡಿದ ಅವರು, ಸರ್ಕಾರದಲ್ಲಿ ಆಗುವ ವರ್ಗಾವಣೆ ಬಗ್ಗೆ ನಾನು ಯಾಕೆ ಮಾತನಾಡಬೇಕು. ನಾನು ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಮಾತ್ರ ಎಂದರು. ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಗೆಲುವಿನ ನಾಗಲೋಟವನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಉಪಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗೇಮ್ ಪ್ಲಾನ್ ಎಂದರು.