ಶಿವಮೊಗ್ಗ: ಜಿಲ್ಲೆಯ ಭಾವೈಕ್ಯತೆಯ ಕೇಂದ್ರವಾದ ಹಣಗೆರೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದರೆ, ದೇವರ ದರ್ಶನ ಭಾಗ್ಯ ಸಿಗದ ಭಕ್ತರು ಹಣಗೆರೆಯ ದೇವಾಲಯದ ಬಳಿ ಇರುವ ಮೈಲಿಗಲ್ಲಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಕಾಡಿನ ಮಧ್ಯದಲ್ಲಿ ಇರುವ ಹಣಗೆರೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ದೇವತೆಗಳು ಒಂದೇ ಸೂರಿನಡಿ ನೆಲೆಸಿವೆ. ಇಲ್ಲಿಗೆ ದೇಶ - ವಿದೇಶಗಳಿಂದ ಸಹ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಸದ್ಯ ಕೊರೊನಾ ದಿಂದಾಗಿ ಭಕ್ತರಿಗೆ ಪ್ರವೇಶ ನೀಡಿಲ್ಲ. ದೇವಾಲಯ ಚಿಕ್ಕದಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಎಂಬ ಕಾರಣ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಈ ದೇವಾಲಯದಲ್ಲಿ ಭಕ್ತರ ಭೇಟಿಗೆ ನಿಷೇಧ ಹೇರಲಾಗಿದೆ.
ಹೀಗಾಗಿ ಭಕ್ತರು, ದೇವರನ್ನು ಕಾಣದೇ ನಿರಾಸೆಗೊಳಗಾಗಿದ್ದಾರೆ. ಕೆಲವರು ಇಲ್ಲಿನ ಮೈಲಿಗಲ್ಲಿಗೆ ಅರಿಶಿನ, ಕುಂಕುಮ ಹಚ್ಚಿ ಪೂಜೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಇಷ್ಟಗಳನ್ನ ಈಡೇರಿಸಿಕೊಳ್ಳುತ್ತಿದ್ದಾರೆ.