ಶಿವಮೊಗ್ಗ: ಜಿಲ್ಲೆಯ ಹೊಸನಗರ ಪಟ್ಟಣದ ಗಂಗನಕೊಪ್ಪದಲ್ಲಿ 15-16ನೇ ಶತಮಾನಕ್ಕೆ ಸೇರಿದ ಪ್ರಾಚ್ಯವಸ್ತುಗಳು ಪತ್ತೆಯಾಗಿವೆ.
ಹೊಸನಗರ ಪಟ್ಟಣದಿಂದ ಸುಮಾರು 3 ಕಿ..ಮೀ. ದೂರದಲ್ಲಿರುವ ಗಂಗನಕೊಪ್ಪ ಗ್ರಾಮದ ಹೊರವಲಯದಲ್ಲಿ ಹರಿಯುವ ಕಲ್ಲುಹಳ್ಳ ಹೊಳೆಯ ಬಲದಂಡೆಯ ಬಳಿ ವಸ್ತುಗಳು ಪತ್ತೆಯಾಗಿವೆ. ಸುಪ್ರಕಾಶ್ ಎಂಬುವರು ತಮ್ಮ ತೋಟದಲ್ಲಿ ಸಸಿಗಳನ್ನು ನೆಡಲು ಮಣ್ಣನ್ನು ತೆಗೆಯುವ ವೇಳೆ ಪ್ರಾಗೈತಿಹಾಸ ಹಿನ್ನೆಲೆಯ ಸುಮಾರು 15-16 ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ಅವಶೇಷಗಳು ದೊರೆತಿವೆ.
ಐತಿಹಾಸಿಕ ಅವಶೇಷಗಳಲ್ಲದೆ ಈ ನೆಲೆಯಲ್ಲಿ 16ನೇ ಶತಮಾನಕ್ಕೆ ಸಂಬಂಧಿಸಿದ ಕಬ್ಬಿಣದ ಪಿರಂಗಿಗುಂಡು, ಕಬ್ಬಿಣದ ಸಲಾಕೆ, ಗ್ರಾನೈಟ್ ಶಿಲೆಯಿಂದ ಮಾಡಿದ ಪಿರಂಗಿಗುಂಡುಗಳು ಹಾಗೂ ಔಷೋದೋಪಚಾರ ಮತ್ತು ಇತರ ಕಾರ್ಯಗಳಿಗೆ ಬಳಸುತ್ತಿದ್ದ ಅರೆಯುವ ಕಲ್ಲುಗಳು, ರುಬ್ಬುವ ಕಲ್ಲುಗಳು, 15-16ನೇ ಶತಮಾನದಲ್ಲಿ ಮನೆಗಳ ನಿರ್ಮಾಣದಲ್ಲಿ ಬಳಸುತ್ತಿದ್ದ ಕೀ ಸ್ಟೋನ್(ಚಿಲಕ)ಗಳು ಹಾಗೂ ಕೆಂಪುವರ್ಣದ ದಪ್ಪನಾದ ಮಡಿಕೆಚೂರು ಲಭ್ಯವಾಗಿದೆ. ಇದಲ್ಲದೆ ಗ್ರಾನೈಟ್ ಶಿಲೆಯಿಂದ ಮಾಡಿದ ಗಣೇಶನ ಭಗ್ನಗೊಂಡ ಶಿಲ್ಪವನ್ನು ಕಾಣಬಹುದು. ಇವುಗಳ ಆಧಾರದ ಮೇಲೆ ಗಂಗನಕೊಪ್ಪ ನೆಲೆಯಲ್ಲಿ ಪ್ರಾಗೈತಿಹಾಸ ಕಾಲದಿಂದ ಐತಿಹಾಸಿಕ ಕಾಲದವರೆಗೆ ಮಾನವನು ನೆಲೆನಿಂತಿದ್ದರ ಕುರಿತು ದೃಢಿಕರಿಸಬಹುದು.
ಇದನ್ನೂ ಓದಿ: ನೈಟ್, ವೀಕೆಂಡ್ ಕರ್ಫ್ಯೂ ಸಂಬಂಧ ನಾಳೆ ತೀರ್ಮಾನ : ಸಚಿವ ಅಶೋಕ್
ಕ್ರಿ.ಶ. 1499 ಕ್ರಿ.ಶ. 1763 ರವರೆಗೆ ಕೆಳದಿ ನಾಯಕರು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಆಳಿದ ರಾಜವಂಶ, ಶಿವಮೊಗ್ಗ ಜಿಲ್ಲೆಯ ಕೆಳದಿ, ಬಿದನೂರು, ಇಕ್ಕೇರಿಗಳನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಚೌಡಪ್ಪನಾಯಕರಿಂದ ಹಿಡಿದು ರಾಣಿ ವೀರಮ್ಮಾಜಿವರೆಗೆ ಈ ರಾಜವಂಶ ಆಳಿದೆ. ಇವರು ಆರಂಭದಲ್ಲಿ ವಿಜಯನಗರ ಸಾಮಂತರಾಗಿ ಆಳಿದರು. 1565ರಲ್ಲಿ ವಿಜಯನಗರ ಪತನ ನಂತರ ಸ್ವತಂತ್ರರಾದರು. ನಂತರ ಶಿವಮೊಗ್ಗ, ಕರಾವಳಿ ಜಿಲ್ಲೆ, ಮಧ್ಯಭಾಗದ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ಆಳ್ವಿಕೆಯನ್ನು ನಡೆಸಿದರು. ಹೀಗೆ ಗಂಗನಕೊಪ್ಪ ಗ್ರಾಮದಲ್ಲಿ ಇವರ ಕಾಲಕ್ಕೆ ಸೇರಿದ ನೆಲೆ ದೊರೆತಿದ್ದು, ಅಲ್ಲಿ ದೊರೆತಿರುವಂತಹ ಅವಶೇಷಗಳು ಸಾಕ್ಷಿಯಾಗಿವೆ ಎಂದು ಸುಪ್ರಕಾಶ್ ಭಟ್ ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ