ರಾಮನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವಾಗ ಊಹಾಪೋಹ ಸಹಜ. ಯಡಿಯೂರಪ್ಪ ನಮ್ಮ ನಾಯಕರು. ಅವರೇ ನಮ್ಮ ಮುಖ್ಯಮಂತ್ರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಯಾರೇ ಸರ್ಕಾರ ನಡೆಸಿದರೂ ಊಹಾಪೋಹಗಳು ಸಹಜ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಕೋವಿಡ್ ಪರಿಸ್ಥಿತಿಯಲ್ಲೂ ಯಡಿಯೂರಪ್ಪನವರು ಯುವಕರಂತೆ ಕಾರ್ಯನಿರ್ವಹಿಸಿದ್ದಾರೆ. ಅವರೇ ನಮ್ಮ ನಾಯಕರು. ನಮ್ಮದು ಬಲವಾದ ಹೈಕಮಾಂಡ್ ಎಂದರು.
ವಲಸೆ ಕಾರ್ಮಿಕರಿಗೆ 30 ಲಕ್ಷ, ಕ್ವಾರಂಟೈನ್ ತಪಾಸಣೆಗೆ 50 ಲಕ್ಷ, ಲ್ಯಾಬ್ ಮತ್ತು ಆಸ್ಪತ್ರೆಗೆ 2 ಕೋಟಿ 62 ಲಕ್ಷ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ. ರಾಮನಗರ ಜಿಲ್ಲೆಯಲ್ಲಿನ ಎರಡು ತಾಲೂಕು ಬರ ಪೀಡಿತ ಎಂದು ಘೋಷಣೆಯಾಗಿದೆ. ಒಟ್ಟು 2.71 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ 13.5 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿದ್ದು, ಅದನ್ನು ಮತ್ತಿತರ ವಿಕೋಪಗಳಿಗೆ ಬಳಸಲಾಗುವುದು ಎಂದರು.
ನಿಸರ್ಗ ಚಂಡಮಾರುತ ಹಿನ್ನೆಲೆ ಮುಂಜಾಗ್ರತಾ ಕ್ರಮ: ಕರ್ನಾಟಕಕ್ಕೆ ನಿಸರ್ಗ ಚಂಡಮಾರುತ ಬರುವ ಆತಂಕವಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಎನ್ಡಿಆರ್ಎಫ್ನ ನಾಲ್ಕು ತಂಡ ಬರುತ್ತಿವೆ. ಕೊಡಗು ಮತ್ತು ದಕ್ಷಿಣ ಕನ್ನಡಕ್ಕೆ ಈಗಾಗಲೇ ಎರಡು ತಂಡಗಳು ಆಗಮಿಸಿವೆ. ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅರಣ್ಯ ಭೂಮಿ ವಿವಾದ ಇತ್ಯರ್ಥಕ್ಕೆ ಯತ್ನ: ಅರಣ್ಯ ಇಲಾಖೆ ಜೊತೆ ಚರ್ಚಿಸಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಗುವುದು. ಯಾವುದೇ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಪರ್ಯಾಯವಾಗಿ ಶಾಶ್ವತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದ್ದು, ಸಿಎಂ ಕೂಡ ಸಹಮತ ತೋರಿದ್ದಾರೆ ಎಂದರು.
ಸ್ಮಶಾನ ಸಮಸ್ಯೆ ಇತ್ಯರ್ಥ: ರಾಜ್ಯದ ಪ್ರತಿ ಹಳ್ಳಿಗೊಂದು ಸ್ಮಶಾನ ಇರಬೇಕು. ಅದಕ್ಕಾಗಿ ಜಿಲ್ಲಾಡಳಿತಕ್ಕೆ ಒಂದು ತಿಂಗಳ ಗಡುವು ನೀಡಿದ್ದೇವೆ. ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲೂ ಸ್ಮಶಾನ ನಿರ್ಮಾಣಕ್ಕೆ ಆದ್ಯತೆ ನೀಡಿ ಸರ್ಕಾರಿ ಜಾಗ ಒದಗಿಸಿ ಕೊಡಿ ಎಂದು ಸೂಚಿಸಿದರು.