ರೇಷ್ಮೆನಗರಿ, ಸಪ್ತಗಿರಿಗಳನಾಡು, ಶೋಲೆ ಖ್ಯಾತಿಯ ರಾಮನಗರ ಜಿಲ್ಲೆಯಲ್ಲಿ ಮತ್ತೆ ಗೆಲ್ಲಲು ಡಿಕೆ ಸುರೇಶ್ ಶ್ರಮಿಸಿದ್ದಾರೆ. ಇವರನ್ನ ಮಣಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಅವರನ್ನ ಕಣಕ್ಕಿಳಿಸಿದೆ.
ಡಿಕೆಸು ಮಣಿಸಲು ಕಮಲಪಡೆಗೆ ಸಾಧ್ಯವಾಗುತ್ತಾ?
ಕಾಂಗ್ರೆಸ್ನ ಟ್ರಬೆಲ್ ಶೂಟರ್ ಡಿ.ಕೆ. ಬ್ರದರ್ಸ್ ವಿರುದ್ದ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿತ್ತು. ಯೋಗೇಶ್ವರ್ ಮಗಳು ನಿಶಾಗೆ ಟಿಕೆಟ್ ಕಾಯಂ ಎನ್ನುತ್ತಿರುವಾಗಲೇ ಬಿಜೆಪಿ ಹೈಕಮಾಂಡ್ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ್ ನಾರಾಯಣ ಅವರನ್ನ ಕಣಕ್ಕಿಳಿಸಿತ್ತು.
ಪ್ರಚಾರದಲ್ಲಿ ಹಿಂದೆ ಬಿದ್ದ ಬಿಜೆಪಿ:
ಬೆಂಗಳೂರು ನಗರ ಪ್ರದೇಶದ ಬಹುಪಾಲು ವಿಧಾನಸಭಾ ಕ್ಷೇತ್ರಗಳು ಈ ವ್ಯಾಪ್ತಿಗೆ ಬರೋದ್ರಿಂದ ಸಹಜವಾಗಿಯೇ ಹಣಾಹಣಿ ನಿರೀಕ್ಷಿಸಲಾಗಿತ್ತು. ಆದರೆ, ಪ್ರಚಾರದ ವಿಷಯದಲ್ಲೂ ಬಿಜೆಪಿ ಹಿಂದೆ ಬಿದ್ದಿದ್ದು, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ವರದಾನವಾಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿವೆ.
ಇಲ್ಲೀಗ ಡಿಕೆಸು ಪ್ರಾಬಲ್ಯವೇ ಹೆಚ್ಚು:
ಕುಮಾರಸ್ವಾಮಿ ಗೆದ್ದು ಒಮ್ಮೆ ಸಂಸದರಾದರು ನಂತರ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬೈ ಎಲೆಕ್ಷನ್ ನಲ್ಲಿ ಡಿ.ಕೆ ಸುರೇಶ್ ಸ್ಫರ್ಧಿಸಿ ಗೆಲುವು ಪಡೆದರು. ನಂತರ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಗೆಲುವಿನ ನಗೆ ಬೀರಿದ್ದರು . ಇದೀಗ ಮೂರನೇ ಭಾರಿಗೆ ಆಯ್ಕೆ ಬಯಸಿ ಸ್ಪರ್ಧಾ ಕಣದಲ್ಲಿದ್ದಾರೆ. ಈಭಾರಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳ ಜೊತೆಗೆ ಮೈತ್ರಿ ಅಭ್ಯರ್ಥಿಯಾಗಿರೋದು ಡಿಕೆ ಬ್ರದರ್ಸ್ ಅಶ್ವ ಕಟ್ಟಿ ಹಾಕೋದಕ್ಕೆ ಬಿಜೆಪಿಗೆ ಕಷ್ಠಸಾಧ್ಯ ಎಂದೇ ಹೇಳಲಾಗುತ್ತಿದೆ.
24 ಲಕ್ಷ ಮತದಾರರಲ್ಲಿ 16.20 ಲಕ್ಷ ಜನರಿಂದ ವೋಟಿಂಗ್:
ಅತಿ ದೊಡ್ಡ ಕ್ಷೇತ್ರ ಎಂದು ಹೆಸರಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 12,87,524 ಪುರುಷರು, 12,09,276 ಮಹಿಳಾ ಮತದಾರರು, 341 ಇತರೆ ಹಾಗೂ 317 ಸೇವಾ ಮತದಾರರು ಸೇರಿದಂತೆ ಒಟ್ಟು 24,97,458 ಮತದಾರರಿದ್ದಾರೆ. ಇದರಲ್ಲಿ 831019 ಪುರುಷರು , 789565 ಮಹಿಳಾ ಮತದಾರರು, 39 ಇತರೆ ಮತದಾರರು ಸೇರಿ ಒಟ್ಟು 16,20,623 ಮತಗಳು ಚಲಾವಣೆಗೊಂಡಿವೆ.
ಇದೇ ಮೊದಲ ಬಾರಿಗೆ ಸ್ಪರ್ಧಿಸದ ಜೆಡಿಎಸ್:
ಈವರೆಗೂ ನಡೆದ ಎಲ್ಲ ಲೋಕಸಭಾ ಚುನಾವಣೆಗಳಲ್ಲಿಯು ಜೆಡಿಎಸ್ ಸ್ಪರ್ಧೆ ಮಾಡುತ್ತಲೇ ಇತ್ತು. 3 ಬಾರಿ ಜೆಡಿಎಸ್ ಅಭ್ಯರ್ಥಿಗಳು ಇಲ್ಲಿಂದಲೇ ಆಯ್ಕೆ ಆಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿಯೇ ಇಲ್ಲದೇ ಚುನಾವಣೆ ನಡೆದಿರುವುದು ಇನ್ನೊಂದು ಸಾಧನೆ ಎನ್ನಬಹುದು. ಒಟ್ಟಿನಲ್ಲಿ ಚುನಾವಣೆ ಫಲಿತಾಂಶ ಹೇಗೆ ಬಂದರೂ, ಅದು ಇತಿಹಾಸ ಪುಟ ಸೇರುವುದಂತು ಖಚಿತ.
ಒಟ್ಟಾರೆ ಕೌತುಕದ ಕೇಂದ್ರವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ಪ್ರಸ್ತುತ ಚುನಾವಣೆಯಲ್ಲಿ ಗೆಲುವು ಯಾರದೇ ಆದರೂ, ಒಂದು ವಿಶೇಷ ದಾಖಲೆ ಆಗಲಿದೆ ಎಂಬುದು ನಿಶ್ಚಿತವಾಗಿದೆ. ಸೋಲು ಗೆಲುವು ಎಂಬುದು ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರ ಪಾಲಿಗೂ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.