ರಾಮನಗರ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಈ ಗ್ರಾಮದಲ್ಲಿ ಬಂಧಿಯಾದ 7ನೇ ಚಿರತೆ ಇದಾಗಿದೆ.
ತಾಲೂಕಿನ ಕೂಟಗಲ್ ಹೋಬಳಿಯ ಅರೇಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ರಾತ್ರಿ ಆಯ್ತು ಅಂದ್ರೆ ಸಾಕು ಪ್ರಾಣಿಗಳನ್ನು ಕಾಯೋದೇ ಗ್ರಾಮಸ್ಥರಿಗೆ ಹರಸಾಹಸ ಎನ್ನುವಂತಾಗಿದ್ದು, ಭಯದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಲ್ಲದೆ ಚಿರತೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಬಂದಿದ್ದರು. ಹೀಗಾಗಿ ಗ್ರಾಮದ ಮರಿಚಿಕ್ಕೇಗೌಡ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಈ ಬೋನಿಗೆ ಇದೀಗ 3 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಪ್ರದೇಶದ ಅಂಚು ಹಾಗೂ ಗುಡ್ಡಗಾಡಿನಿಂದ ಸುತ್ತುವರಿದಿರುವ ಈ ಗ್ರಾಮದಲ್ಲಿ ಚಿರತೆ ಉಪಟಳ ತಪ್ಪಿಲ್ಲ. ಇದನ್ನ ತಡೆಯಲು, ರೈತರ ಸಾಕುಪ್ರಾಣಿಗಳನ್ನು ಉಳಿಸಿಕೊಳ್ಳಲು ಗ್ರಾಮಕ್ಕೆ ಚಿರತೆ ಬೋನಿನ ಅವಶ್ಯಕತೆ ಇದ್ದು, ಇದನ್ನು ಇಲ್ಲಿಯೇ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಧಾಳೇಶ್, ಅರಣ್ಯ ವೀಕ್ಷಕ ಶಾಂತಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.