ರಾಮನಗರ: ಅಂತೂ ಇಂತೂ 50 ಕಿಲೋ ಮೀಟರ್ ಸಂಚರಿಸುವ ಮೂಲಕ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ನಾಲ್ಕನೇ ದಿನವೂ ಮುಂದುವರೆದಿದೆ. ಈ ಮಧ್ಯೆ ರಾಜ್ಯ ಸರ್ಕಾರ ಮತ್ತು ಪಾದಯಾತ್ರೆ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ಅನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರ ಪಟ್ಟಣದಿಂದ ಹೊರಟ ಮೇಕೆದಾಟು ಪಾದಯಾತ್ರೆ ಇಂದು ಚಿಕ್ಕೇನಹಳ್ಳಿ ಗ್ರಾಮದಿಂದ ಡಿಕೆಶಿ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಆರಂಭಗೊಂಡು ಸಂಜೆಯ ವೇಳೆ ರೇಷ್ಮೆನಗರಿ ರಾಮನಗರಕ್ಕೆ ಬಂದು ತಲುಪಲಿದೆ. ಪಾದಯಾತ್ರೆ ಉದ್ದಕ್ಕೂ ಜನಸಾಗರೇ ಹರಿದು ಬರುತ್ತಿದ್ದು, ಹೋದ ಕಡೆಯಲ್ಲೆಲ್ಲ ಅದ್ಧೂರಿಯಾಗಿ ಸ್ವಾಗತ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಮನಗರದಲ್ಲಿ ಪಾದಯಾತ್ರೆ ತಡೆಯುತ್ತಿರುವ ಹಿನ್ನೆಲೆ ನಿಟ್ಟಿನಲ್ಲಿ ಸರ್ಕಾರ ಏನು ಪ್ಲಾನ್ ನಡೆಸಿದೆ ಎಂಬುದನ್ನು ನೋಡೋಣಾ. ಅವರು ಏನು ಕ್ರಮ ತೆಗೆದುಕೊಳ್ತಾರೆ ಅಂತಾ ಗೊತ್ತಾಗುತ್ತೆ ಎಂದರು. ಅದನ್ನು ಎದುರಿಸಲು ನಾವೆಲ್ಲ ಎಲ್ಲ ರೀತಿಯಿಂದಲೂ ರೆಡಿ ಇದ್ದೇವೆ. ಸರ್ಕಾರ ಅವರದ್ದು ಇದೆ. ಅವ್ರು ಏನಾದರೂ ಕ್ರಮ ಕೈಗೊಳ್ಳಲಿ. ಲೀಗಲ್ ಆಗಿ ನಾವು ಅದನ್ನು ಎದುರಿಸುತ್ತೇವೆ. ಇಚ್ಛಾಶಕ್ತಿಯಿಂದ ಪಾದಯಾತ್ರೆ ಮಾಡಿ, ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದರು.
ರಾಜಕೀಯ ಪಾದಯಾತ್ರೆ ಕೈ ಬಿಟ್ಟು, ಕೊರೊನಾ ನಿಯಂತ್ರಣಕ್ಕೆ, ಸಹಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಅವರಿಗೆ ಸಹಕಾರ ಕೊಡ್ತಾನೆ ಇದ್ದೇವೆ. ಕೊರೊನಾ ನಿಯಂತ್ರಣ ಮಾಡಬೇಕಾಗಿರೋದು ಬಿಜೆಪಿ ಸರ್ಕಾರ. ಅದನ್ನು ಬರದೆ ಇರೋ ರೀತಿ ತಡಿಬೇಕಾದವರು ಕೂಡ ಅವರೇ. ಇವತ್ತು ಕೊರೊನಾ ಜಾಸ್ತಿಯಾಗಿರೋದಕ್ಕೆ ಅವರೇ ಕಾರಣ. ಪ್ರಧಾನಿ ನರೇಂದ್ರ ಮೋದಿಯವರು ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿಯವರು ಮೂರನೇ ಅಲೆ ಬಂದ ಮೇಲೆ ಸಾರ್ವಜನಿಕ ಸಭೆ ಮಾಡ್ತಿಲ್ವಾ?. ಅವರ ಪಕ್ಷದ ಶಾಸಕರೇ ಜಾತ್ರೆಯಲ್ಲಿ ಱಲಿ ಮಾಡ್ತಿಲ್ವಾ?. ಅವರ ಎಂಎಲ್ಎಗಳನ್ನು ನಿಯಂತ್ರಣ ಮಾಡೋಕೆ ಆಗದೆ ಇರೋರು, ನಮಗೆ ಏನು ಹೇಳ್ತಾರೆ? ಎಂದು ಸಿಎಂ ಬೊಮ್ಮಾಯಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರೇಣುಕಾಚಾರ್ಯ ಕ್ಷಮೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡ್ಬಿಟ್ಟು ಕ್ಷಮೆ ಕೇಳಿದ್ರೆ ಅವರನ್ನು ಸುಮ್ಮನೆ ಬಿಟ್ಟು ಬಿಡೋದಾ?. ನಾನೂ ಕೂಡ ಕ್ಷಮೆ ಕೇಳಬಹುದು. ಅವರು ಕೇಸ್ ಹಾಕಬಾರದು ಎಂದು ಕ್ಷಮೆ ಕೇಳಿರಬಹುದು. ಆದರೆ, ಅವರ ವಿರುದ್ಧ ಯಾಕೆ ಕ್ರಮ ತಗೊಂಡಿಲ್ಲ? ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಓದಿ: ಪಾದಯಾತ್ರೆ ಕುರಿತು ಕೋರ್ಟ್ ಹೇಳಿದಂತೆ ಸರ್ಕಾರ ಕೇಳುತ್ತದೆ: ಸಚಿವ ಈಶ್ವರಪ್ಪ