ರಾಮನಗರ: ಅನ್ಯ ಕೋಮಿನ ಯುವತಿಯನ್ನ ಪ್ರೀತಿಸಿದ್ದ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಸೋಲೂರು ಸಮೀಪದ ಕಂಕೇನಹಳ್ಳಿ ಲಾಯದ ದರ್ಗಾ ಬಳಿ ನಡೆದಿದೆ.
ನೆಲಮಂಗಲ ಸಮೀಪದ ಮಾಗಡಿ ತಾಲೂಕಿನ ಕಂಕೇನಹಳ್ಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂ.ಗ್ರಾ. ಜಿಲ್ಲೆಯ ನೆಲಮಂಗಲದ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ (24) ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ.

ಪ್ರೇಮಿಯೊಂದಿಗೆ ಮದುವೆ ಮಾಡಿಕೊಡುವುದಾಗಿ ಕರೆಸಿ ಯುವಕನ ಕಾಲು ಕಟ್ಟಿ ಆತನ ಸೊಂಟದಲ್ಲಿದ್ದ ಬೆಲ್ಟ್ನಿಂದ ಕುತ್ತಿಗೆ ಬಿಗಿದು, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ವಿವರ...
ಅನ್ಯ ಕೋಮಿಗೆ ಸೇರಿದ ಯುವತಿಯನ್ನ ಬೇರೆ ಕೋಮಿನ ಯುವಕನೊಬ್ಬ ಪ್ರೀತಿಸುತ್ತಿದ್ದ. ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರ ಪ್ರೇಮದ ಬಗ್ಗೆ ಹುಡುಗಿ ಕುಟುಂಬಕ್ಕೆ ತಿಳಿದಿತ್ತು. ಇದಕ್ಕೆ ಯುವತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇಬ್ಬರೂ ಕೇರ್ ಮಾಡದೆ ಎರಡು ಬಾರಿ ಓಡಿ ಹೋಗಿದ್ದರಂತೆ.

ಇದರಿಂದ ಬೇಸತ್ತ ಯುವತಿ ಕುಟುಂಬ ಲಕ್ಷ್ಮಿಪತಿ ಕೊಲೆಗೆ ಸ್ಕೆಚ್ ರೂಪಿಸಿತ್ತಂತೆ. ಲಕ್ಷ್ಮೀಪತಿಯನ್ನು ಯುವತಿ ಸಂಬಂಧಿಯೊಬ್ಬ ಕರೆ ಮಾಡಿ ಇಸ್ಲಾಂಪುರದ ಬಸವನಹಳ್ಳಿ ರಸ್ತೆಯ ರಂಗನಾಥ ವೈನ್ಸ್ ಬಳಿಗೆ ಬರುವಂತೆ ಹೇಳಿದ್ದಾನೆ. ನಂತರ ಬಲವಂತವಾಗಿ ಆತನಿಗೆ ಮದ್ಯ ಕುಡಿಸಿ ಯುವತಿಯ ಮನೆಗೆ ಕರೆದೊಯ್ದಿದ್ದಾನೆ.
ಲಕ್ಷ್ಮಿಪತಿಯನ್ನು ಅಲ್ಲಿಂದ ಯುವತಿ ತಂದೆ ಹಾಗೂ ಇತರರು ಕನಕೇನಹಳ್ಳಿ ಬಳಿಯ ಬೆಟ್ಟಕ್ಕೆ ಕರೆದೊಯ್ದಿದ್ದು, ಮತ್ತಷ್ಟು ಕುಡಿಸಿ ಆನತ ಬೆಲ್ಟ್ನಿಂದಲೇ ಕೊಲೆ ಮಾಡಿದ್ದಾರೆ. ಲಕ್ಷ್ಮೀಪತಿ ಜೊತೆಗೆ ಬಂದಿದ್ದ ನಟರಾಜ್ ಎಂಬಾತನಿಗೆ ಕೊಲೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ನಟರಾಜ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಅಲ್ಲದೆ ಘಟನೆ ಸಂಬಂಧ ಯುವತಿ ತಂದೆ ಹಾಗೂ ಸಿಕಂದರ್ ಎಂಬಾತನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.