ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಧಾರ್ಮಿಕ ಕ್ಷೇತ್ರವಾದ ಗೌಡಗೆರೆ ಗ್ರಾಮಲ್ಲಿ ಬೃಹತ್ ಚಾಮುಂಡೇಶ್ವರಿ ವಿಗ್ರಹ ಅನುಷ್ಠಾನಗೊಳ್ಳುತ್ತಿದೆ. ಬೊಂಬೆಗಳ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ ವಿಶ್ವ ಪ್ರಸಿದ್ಧಿ ಪಡೆದಿರುವ ಬೊಂಬೆನಗರಿ ಚನ್ನಪಟ್ಟಣಕ್ಕೆ ಮತ್ತೊಂದು ಮಹತ್ತರ ಗರಿಯೊಂದು ಸೇರ್ಪಡೆಗೊಳ್ಳುತ್ತಿದೆ.
ಗೌಡಗೆರೆ ಶ್ರೀಕ್ಷೇತ್ರದಲ್ಲಿ ನೆಲಮಟ್ಟದಿಂದ ಅರವತ್ತು ಅಡಿ ಎತ್ತರವಿರುವ, ಹದಿನೆಂಟು ಭುಜಗಳ ಶಂಖ ಚಕ್ರ, ಗದಾಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಹೀಗೆ ಇನ್ನೂ ಮೊದಲಾದ ಹದಿನೆಂಟು ಬಗೆಯ ಆಯುಧಗಳನ್ನು ತಮ್ನ ಕೈಗಳಲ್ಲಿ ಧರಿಸಿರುವ ಸೌಮ್ಯರೂಪಿಯಾಗಿ ನಿಂತಿರುವ ಭಂಗಿಯಲ್ಲಿ ನಾಡದೇವತೆ, ಜಗನ್ಮಾತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ಸುವರ್ಣ ಲೇಪಿತ ಪಂಚಲೋಹ - ಕಬ್ಬಿಣ, ಹಿತ್ತಾಳೆ, ತಾಮ್ರ, ಚಿನ್ನ ಮತ್ತು ಬೆಳ್ಳಿ ಲೋಹಗಳಿಂದ ಮಾಡುತ್ತಿರುವ ವಿಗ್ರಹ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ.
ಆಗಸ್ಟ್ 8ರಂದು ಲೋಕಾರ್ಪಣೆಗೆ ಸಿದ್ಧತೆ
ಪೂರ್ವ ನಿಗದಿಯಂತೆ ಇದೇ ಆಗಸ್ಟ್ 8ರಂದು ಈ ಬೃಹತ್ ವಿಗ್ರಹ ಲೋಕಾರ್ಪಣೆ ಆಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಮುಖ್ಯಸ್ಥರೂ ಹಾಗೂ ಸಂಸ್ಥಾಪಕರಾದ ಗುರೂಜೀ ಮಲ್ಲೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಈ ಮಹತ್ಕಾರ್ಯಕ್ಕೆ ಭಕ್ತರು ಕೂಡಾ ತಮ್ಮ ಇಚ್ಚಾನುಸಾರ ಕೊಡುಗೆ ನೀಡಬಹುದಾಗಿದೆ.
![historical- chamundi statue -in-ramnagar](https://etvbharatimages.akamaized.net/etvbharat/prod-images/r-kn-rmn-01-03082021-historical-temple-ka10051_03082021140537_0308f_1627979737_630.jpg)
ದೇವಾಲಯಕ್ಕೆ ಇದೆ ನೂರಾರು ವರ್ಷಗಳ ಇತಿಹಾಸ
ಈ ಗೌಡಗೆರೆ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ದೇವಿಯ ಇಚ್ಚಾನುಸರಾವಾಗಿ ಇಲ್ಲೊಂದು ಬೃಹತ್ ಚಾಮುಂಡೇಶ್ವರಿ ತಾಯಿ ವಿಗ್ರಹ ಪ್ರತಿಷ್ಠಾಪನೆಗೊಳ್ಳುತ್ತಿದೆ. ಈ ದೇಗುಲಕ್ಕೆ ರಾಜ್ಯದಿಂದ ಅಲ್ಲದೇ ಹೊರ ದೇಶಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
![historical- chamundi statue -in-ramnagar](https://etvbharatimages.akamaized.net/etvbharat/prod-images/r-kn-rmn-01-03082021-historical-temple-ka10051_03082021140537_0308f_1627979737_1050.jpg)
ಮಕ್ಕಳಿಲ್ಲದವರು ಇಲ್ಲಿ ಬಂದು ತಾಯಿಯ ದರ್ಶನ ಪಡೆದರೆ ಸಾಕು ತಮ್ಮ ಇಷ್ಟಾರ್ಥಗಳು ಸಿದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ದೇಗುಲದಲ್ಲಿ ಬಸಪ್ಪ ಇದ್ದು, ಈ ಬಸಪ್ಪ ಕೂಡ ಬೇಡಿದ ವರ ನೀಡುತ್ತಾನೆಂಬ ಪ್ರತೀತಿ ಹಿಂದಿನಿಂದಲೂ ಇದೆ. .
ಇದನ್ನೂ ಓದಿ: ಆಸ್ತಿಗಾಗಿ ಮೈಸೂರು ಮಾಜಿ ದಿವಾನ್ ಮೊಮ್ಮಗಳ ಕೊಲೆ ಕೇಸ್: ಜೈಲು ಸೇರಿರುವ ಪತಿಯಿಂದ ಕ್ಷಮಾದಾನಕ್ಕಾಗಿ ಅರ್ಜಿ