ರಾಮನಗರ: ಕೊರೊನಾ ಸೋಂಕು ತಡೆಗಟ್ಟಲು ಒಂದೆಡೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಸೋಂಕಿತರ ಪ್ರಹಸನಗಳೇ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಓದಿ: ಸೋಂಕು ಹೆಚ್ಚಳ: ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ- ಸಿಎಂ,ಆರೋಗ್ಯ ಸಚಿವರಿಗೆ ಪತ್ರ ಬರೆದ ದೇವೇಗೌಡರು
ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಮೂರಂಕಿ ದಾಟುತ್ತಿದೆ. ಇದರ ನಡುವೆಯೇ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಬದಲು ಅಜ್ಞಾತ ಸ್ಥಳಗಳಲ್ಲಿ ಅವಿತುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಮವಾರದವರೆಗೆ 8,697 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 567 ಪ್ರಕರಣ ಸಕ್ರಿಯವಾಗಿವೆ. ಕಳೆದ ಮೂರು ದಿನಗಳಲ್ಲಿ ದಿನಕ್ಕೆ ಕನಿಷ್ಠ ಸರಿಸುಮಾರು 100 ಪ್ರಕರಣಗಳು ದಾಖಲಾಗುತ್ತಿವೆ.
ಇದರ ನಡುವೆಯೇ ಕಳೆದೊಂದು ತಿಂಗಳಿನಲ್ಲಿ ಸುಮಾರು 500ರಿಂದ 600 ಪ್ರಕರಣಗಳು ದಾಖಲಾಗಿದ್ದರೆ, ಇದರಲ್ಲಿಯೇ 40 ಪ್ರಕರಣಗಳಲ್ಲಿನ ಸೋಂಕಿತರು ಕಣ್ಮರೆಯಾಗಿದ್ದಾರೆ.
ಮಾಸ್ಕ್ ಹಾಕುತ್ತಿಲ್ಲ:
ಒಂದೆಡೆ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಎಲ್ಲೆಡೆ ಹರಡುತ್ತಿದ್ದರೂ ಸಾರ್ವಜನಿಕರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಪಾಸಿಟಿವ್ ವರದಿ ಬಂದರೂ ಸರಿಯಾದ ಮಾಹಿತಿ ನೀಡದೆ ವಾರ್ ರೂಂ ಸಿಬ್ಬಂದಿಗೆ ಸತಾಯಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದ 40ಕ್ಕೂ ಹೆಚ್ಚು ಜನರು ಸರಿಯಾದ ಮಾಹಿತಿಯನ್ನೇ ನೀಡಿಲ್ಲ. ಡಿಸಿ ಕಂಟ್ರೋಲ್ ರೂಂ ಅಥವಾ ಜಿಲ್ಲಾ ವಾರ್ ರೂಂನಿಂದ ಕರೆ ಮಾಡಿದರೆ ಕೆಲವರ ಫೋನ್ ಸ್ವಿಚ್ ಆಫ್ ಬರುತ್ತಿದ್ದರೆ ಮತ್ತೆ ಕೆಲವರು ‘ಇದು ನನ್ನ ನಂಬರ್ ಅಲ್ಲ, ಈ ವಿಳಾಸದಲ್ಲಿ ನಾವಿಲ್ಲ’ ಎಂಬ ಉತ್ತರ ಬರುತ್ತಿದೆ.
ಪರಿಣಾಮ ಪಾಸಿಟಿವ್ ಬಂದವರೂ ನಗರದ ತುಂಬಾ ಓಡಾಡಿಕೊಂಡಿದ್ದಾರೆ. ಸದ್ಯ ಇವರ ಗುರುತು ಪತ್ತೆ ಹಚ್ಚಲು ವಾರ್ ರೂಂ ನೋಡಲ್ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ. ಆದರೂ ಹೆಚ್ಚಿನ ಮಂದಿಯ ಮಾಹಿತಿ ಕಲೆಹಾಕಲು ಅವರಿಗೂ ಸಾಧ್ಯವಾಗುತ್ತಿಲ್ಲದಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಈ ನಡುವೆ ಎಷ್ಟೋ ಮಂದಿ ಜ್ವರ ಬಿಟ್ಟು ಬಿಟ್ಟು ಬರುತ್ತಿದ್ದರೂ ಮನೆಯಲ್ಲೇ ಇರುತ್ತಾರೆ. ಎಲ್ಲಿ ಆಸ್ಪತ್ರೆಗೆ ತೋರಿಸಿದರೆ ಕೊರೊನಾ ಪಾಸಿಟಿವ್ ಬರುತ್ತದೆ ಎಂಬ ಆತಂಕ ಅವರನ್ನು ಆವರಿಸಿದೆ. ಕೊರೊನಾ ಲಕ್ಷಣ ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾದರೆ ಅವರಿಂದ ಹೆಚ್ಚಿನ ಮಂದಿಗೆ ಕೊರೊನಾ ಹರಡುವುದನ್ನು ತಡೆಬಹುದು. ಕೆಲವರಂತೂ ತಮಗೆ ಕೊರೊನಾ ಬಂದಿದೆ ಎಂದು ತಿಳಿದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಸಹಕರಿಸದೆ ಇದ್ದರೆ ಕೊರೊನಾ ನಿಯಂತ್ರಣ ಹೇಗೆ ಮಾಡಲು ಆಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.