ರಾಯಚೂರು: ಸೂರ್ಯಗ್ರಹಣ ನಡೆಯುವ ಸಮಯದಲ್ಲಿ ಗ್ರಹಣ ದೋಷ ಎದುರಾಗುತ್ತದೆ ಎನ್ನುವ ಕಾರಣಕ್ಕೆ ಹಲವು ದೇವಾಲಯಗಳನ್ನು ಬಂದ್ ಮಾಡಲಾಗುತ್ತದೆ. ಆದರೆ ರಾಯಚೂರು ತಾಲೂಕಿನ ಸುಪ್ರಸಿದ್ಧ ಶ್ರೀ ಸೂಗೂರೇಶ್ವರ ದೇಗುಲದಲ್ಲಿ ಮಾತ್ರ ಪೂಜಾ ಕೈಂಕರ್ಯಗಳು, ಭಕ್ತರಿಗೆ ದರ್ಶನ ಎಂದಿನಂತೆ ಇರುತ್ತದೆ ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.
ಯಾವುದೇ ಗ್ರಹಣ ನಡೆದರೂ ಸಹ ಶ್ರೀ ಸೂಗೂರೇಶ್ವರ ದೇವಾಲಯಕ್ಕೆ ಗ್ರಹಣ ದೋಷ ತಗಲುವುದಿಲ್ಲ. ಕಾರಣ ದೇವಾಲಯದ ಒಳಗಿನ ಸೂರ್ಯ-ಚಂದ್ರರ ಮಧ್ಯೆ ಶಿವನಿರುವ ಹಾಲ್ಗಂಬಗಳು. ಗರ್ಭಗುಡಿಯ ಹೊರಗಿರುವ ಈ ಎರಡು ಕಲ್ಲುಗಳಿಂದ ಯಾವುದೇ ಗ್ರಹಣ ನಡೆದರೂ ದೇವಾಲಯಕ್ಕೆ ದೋಷ ತಟ್ಟುವುದಿಲ್ಲ. ಹೀಗಾಗಿ ಗ್ರಹಣ ಸಮಯದಲ್ಲಿ ದೇಗುಲವಿರುವ ನಾಲ್ಕು ದ್ವಾರದ ಬಾಗಿಲುಗಳು ದೇವರ ಸನ್ನಿಧಿಗೆ ಬರುವ ಭಕ್ತರಿಗೆ ದರ್ಶನಕ್ಕಾಗಿ ತೆರದಿರುತ್ತವೆ ಎಂದು ಅರ್ಚಕರು ತಿಳಿಸಿದ್ದಾರೆ.
800 ವರ್ಷಗಳ ಪುರಾತನ ದೇವಾಲಯದ ನಿರ್ಮಾಣ, ವಾಸ್ತು ಮತ್ತು ಆವರಣದಲ್ಲಿರುವ ಸೂರ್ಯ-ಚಂದ್ರರ ಮಧ್ಯೆ ಶಿವನಿರುವ ಹಾಲ್ಗಂಬ ಇದಕ್ಕೆ ಕಾರಣವಾಗಿದೆ. ಅಲ್ಲದೇ ನಾಳೆ ನಡೆಯುವ ದೀರ್ಘಾವಧಿ ಸೂರ್ಯಗ್ರಹಣದ ಸಮಯದಲ್ಲಿ ಸಹ ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು ನಡೆಯುತ್ತವೆ ಎನ್ನುತ್ತಾರೆ ದೇವಾಲಯದ ಆರ್ಚಕರು.