ರಾಯಚೂರು: ಬೈಕ್, ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಪರಿಣಾಮ ಬೈಕ್ನಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಈಜೆ ಹೊಸಳ್ಳಿ ಕ್ಯಾಂಪ್ ಬಳಿ ಈ ದುರ್ಘಟನೆ ಸಂಭವಿಸಿದೆ. ನೀತಿನ್ ಸಾಯಿ(14) ಮೃತಪಟ್ಟಿದ್ದು, ಮೃತನ ಅಜ್ಜ ಸುಬ್ಬರಾವ್, ಸಹೋದರಿಗೆ ಗಂಭೀರವಾಗಿ ಗಾಯವಾಗಿದೆ. ಸಾಸಲಮರಿ ಕ್ಯಾಂಪ್ನಿಂದ ಈಜೆ ಹೊಸಳ್ಳಿ ಕ್ಯಾಂಪ್ ಕಡೆ ಬೈಕ್ ಮೇಲೆ ಸುಬ್ಬರಾವ್ ತನ್ನಿಬ್ಬರು ಮೊಮ್ಮಕ್ಕಳೊಂದಿಗೆ ತೆರಳುತ್ತಿದ್ದರು. ಕ್ಯಾಂಪ್ ಕ್ರಾಸ್ ಬಳಿ ತಮ್ಮ ಸಂಬಂಧಿಕರನ್ನ ಮಾತನಾಡಿಸಲು ಬೈಕ್ ಕ್ರಾಸ್ ಮಾಡಲು ಹೋಗಿದ್ದಾರೆ. ಈ ವೇಳೆ ಸಿಂಧನೂರಿನಿಂದ ಗಂಗಾವತಿ ಕಡೆ ತೆರಳುತ್ತಿದ್ದ ಟ್ಯ್ರಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಸುಬ್ಬರಾವ್ ಹಾಗೂ ಆತನ ಮೊಮ್ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಬಾಲಕ ಮೃತಪಟ್ಟಿದ್ದು, ಮ್ಮೊಮ್ಮಗಳು ಮತ್ತು ಸುಬ್ಬರಾವ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತ ಸಂಭವಿಸಿದ ಸ್ಥಳದಿಂದ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.