ರಾಯಚೂರು: ಜೆಎನ್ಯು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಎಸ್ಎಫ್ಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಸ್ಎಫ್ಐ ಪ್ರತಿಭಟನೆ ನಡೆಸಿ, ಫ್ಯಾಸಿಸ್ಟ್ ಹಿನ್ನೆಲೆಯ ABVP ಸಂಘಟನೆಗೆ ಸೇರಿದ ಗುಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ಸಂಜೆಯ ಸುಮಾರಿಗೆ ಗೂಂಡಾಗಳು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕ್ಯಾಂಪಸ್ ಸೇರಿದಂತೆ ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮತ್ತು ಕೊಠಿಡಿಯೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ಸಮುದಾಯದ ಮೇಲೆ ಮಾಡಿದ ದೊಡ್ಡ ದಾಳಿಯಾಗಿದೆ.
ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಸಂಘಟನೆಗಳು ಜಂಟಿಯಾಗಿ ತೀವ್ರವಾಗಿ ಖಂಡಿಸಿದೆ.
ಪ್ರತಿಭಟನೆಯಲ್ಲಿ SFI ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಭಾರಿ ಸಂಖ್ಯೆಯ ಎಬಿವಿಪಿ ಸಂಘಟನೆಗೆ ಸೇರಿದ ಗುಂಡಾಗಳು ಮತ್ತು ಹೊರಗಿನಿಂದ ಬಂದ ಕಿಡಿಗೇಡಿಗಳು ವಿದ್ಯಾರ್ಥಿ ಮುಖಂಡರನ್ನು ಮತ್ತು ಜನಪರವಾಗಿ ಆಲೋಚಿಸುವ ಪ್ರಾಧ್ಯಾಪಕರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಇವರ ಮೇಲೆ ದಾಳಿಯನ್ನು ಮಾಡಿದ್ದಾರೆ. ಈ ದಾಳಿಯನ್ನು ತಡೆಯುವಲ್ಲಿ ವಿ.ವಿಯ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯು ಸಂಪೂರ್ಣವಾಗಿ ವಿಫಲವಾಗಿದೆ. ಭಾರಿ ಭದ್ರತೆಯ ಮಧ್ಯೆಯೂ ಈ ದಾಳಿ ಆಗಿದೆ ಅಂದರೆ ಇದಕ್ಕೆ ವಿ.ವಿ ಆಡಳಿತ ಮಂಡಳಿಯ ಮತ್ತು ಭದ್ರತಾ ಸಿಬ್ಬಂದಿಗಳು ಸೇರಿದಂತೆ ಸ್ಥಳದಲ್ಲಿ ಇದ್ದ ಮೌನ ದಾರಿ ಪೋಲೀಸರ ಪರೋಕ್ಷ ಬೆಂಬಲ ಮತ್ತು ಸಹಕಾರ ಇರುವ ಅಂಶ ನಮಗೆ ಎದ್ದು ಕಾಣುತ್ತದೆ ಎಂದು ದೂರಿದ್ದಾರೆ.
ಇಂತಹ ಗುಂಡಾಗಿರಿ ಮಾಡುವ ABVP ಸಂಘಟನೆಯನ್ನು ನಿಷೇಧ ಮಾಡುವುದರ ಜೊತೆಗೆ ದೇಶದ ಜ್ವಲಂತ ವಿದ್ಯಾರ್ಥಿ ಸಮಸ್ಯೆ ಗಳ ಪರಿಹಾರಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಇಡೀ ದೇಶವ್ಯಾಪಿ ವಿದ್ಯಾರ್ಥಿಗಳು ಬೀದಿಗಿಳಿದು ವಿದ್ಯಾರ್ಥಿ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.