ರಾಯಚೂರು: ಏತ ನೀರಾವರಿ ಬೇಡ, ಹರಿ ನೀರಾವರಿ ಬೇಕು. ನಾರಾಯಣಪುರ ಬಲದಂಡೆ ನಾಲೆ ಯೋಜನೆ (ಎನ್ಆರ್ ಬಿಸಿ) 5ಎ ಕಾಲುವೆ ಹೋರಾಟದ ಕಾವು ದಿನೇ ದಿನೆ ಹೆಚ್ಚುತ್ತಿದೆ. 75ನೇ ದಿನಕ್ಕೆ ಕಾಲಿಟ್ಟಿರುವ ರೈತರ ಹೋರಾಟವನ್ನು ರಾಜಧಾನಿಯಲ್ಲಿ ನಡೆಸಲು ರೈತರು ಮುಂದಾಗಿದ್ದಾರೆ.
5ಎ ಕಾಲುವೆಯಿಂದ 58 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಕಳೆದ 12 ವರ್ಷಗಳಿಂದ ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದ ಶ್ರೀಬಸವೇಶ್ವರ ದೇವಾಲಯದಲ್ಲಿ ಎನ್ಆರ್ಬಿಸಿ 5ಎ ಕಾಲುವೆ ಹೋರಾಟ ಸಮಿತಿ ಸತತವಾಗಿ ಹೋರಾಟವನ್ನು ಮಾಡುತ್ತಾ ಬಂದಿದೆ. ಆದ್ರೆ ಸರ್ಕಾರ ಮಾತ್ರ ಇದಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ಪಾಮನಕಲ್ಲೂರು, ವಟಗಲ್, ಅಮೀನಗಡ ಸೇರಿದಂತೆ ಯೋಜನೆ ವ್ಯಾಪ್ತಿಗೆ ಬರುವಂತೆ ರೈತರು ತಮ್ಮ ಹೋರಾಟವನ್ನು ಚುರುಕುಗೊಳಿಸಿದ್ದಾರೆ.
ರಾಜಕೀಯ ಲಾಬಿಗೆ ಏತ ನೀರಾವರಿ ಯೋಜನೆ ಜಾರಿ ಆರೋಪ
ಈ ಹೋರಾಟದಿಂದ ಮುಂಬರುವ ಮಸ್ಕಿ ಕ್ಷೇತ್ರದ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದೆಂದು ಸ್ಥಳೀಯ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, 5ಎ ಕಾಲುವೆ ಬದಲಾಗಿ ವಟಗಲ್ ಏತ ನೀರಾವರಿ ಯೋಜನೆ ಜಾರಿಗೆ ತರುತ್ತಿದ್ದಾರೆ. ಆದ್ರೆ ಈ ಯೋಜನೆಯಿಂದ ಯಾವುದೇ ಉಪಯೋಗವಿಲ್ಲ. ಹೀಗಾಗಿ ಕಾಲುವೆ ಮೂಲಕ ಹರಿ ನೀರಾವರಿ ಒದಗಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ರಾಜಧಾನಿ ಪ್ರತಿಭಟನೆಗೆ ರೈತರ ತಯಾರಿ
ಇನ್ನು ಗ್ರಾಪಂ ಚುನಾವಣೆ ಬಹಿಷ್ಕಾರ, ಮಸ್ಕಿ ಪ್ರತಿಭಟನೆ, ಮೆರವಣಿಗೆ ಸೇರಿದಂತೆ ವಿವಿಧ ಹೋರಾಟಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ. ಆದ್ರೆ ಇದೀಗ ನದವಾಡಗಿ ಏತ ನೀರಾವರಿ ಯೋಜನೆಯ ಹೆಸರು ಬದಲಾಯಿಸಿ ವಟಗಲ್ ಏತನೀರಾವರಿ ಯೋಜನೆಯ ಡಿಪಿಆರ್ ಮೂಲಕ ಟೆಂಡರ್ ಪ್ರಕ್ರಿಯೆ ಮಾಡಲಾಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.