ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ನಗರದ ಕೊಳಗೇರಿ ನಿವಾಸಿಗಳಿಗೆ ಸಂಕಟ ಎದುರಾಗಿದೆ. ನಗರದ ಕೊಳಗೇರಿ ಪ್ರದೇಶಗಳಲ್ಲಿ ನಿಂತ ನೀರು, ಕಸದ ರಾಶಿ, ಕೊಳಚೆ ನೀರಿನಿಂದ ಗಬ್ಬು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಗಲೀಜಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ನಾನಾ ರೋಗಗಳಿಗೆ ತುತ್ತಾಗುವಂತಾಗಿದೆ.
ಅಸ್ವಚ್ಛತೆ, ಕಸದ ತಿಪ್ಪೆ, ಮಲಿನ ನೀರು ನಿಲ್ಲುವ ಕಾರಣ ಸೊಳ್ಳೆಗಳ ಪ್ರಮಾಣ ಅಧಿಕವಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಈ ದಿಸೆಯಲ್ಲಿ ರಾಯಚೂರು ನಗರದ ಮಡ್ಡಿಪೇಟೆ, ಹರಿಜನವಾಡ, ಸಿಯಾತಲಾಬ್ ಪ್ರದೇಶಗಳಿಗೆ 'ಈಟಿವಿ ಭಾರತ' ಭೇಟಿ ನೀಡಿ ಪರಿಶೀಲಿಸಿದಾಗ ಈ ಸತ್ಯಾಂಶ ಬಯಲಾಗಿದೆ.
ಈ ಬಡಾವಣೆಗಳಲ್ಲಿ ಎಲ್ಲೆಂದರೆಲ್ಲಿ ಕಸದ ರಾಶಿ, ಒಡೆದ ಕಾಲುವೆಗಳಿಂದ ಬರುವ ಮಲಿನ ನೀರು ರಸ್ತೆಗೆ ಸೇರುತ್ತಿದೆ. ಶೌಚಾಲಯಗಳು ಇಲ್ಲದೇ ಬಯಲು ಬಹಿರ್ದೆಸೆ ಮಾಡುತ್ತಿದ್ದಾರೆ. ಬಡಾವಣೆಗಳಲ್ಲಿ ಇರುವ ಕಸದ ರಾಶಿಗಳಿಂದ ಗಬ್ಬು ನಾರುತ್ತಿದೆ. ಸೊಳ್ಳೆಗಳ ಹಾವಳಿ ವಿಪರೀತ. ಈ ಬಡಾವಣೆಗಳು ಸಾಂಕ್ರಾಮಿಕ ರೋಗಗಳ ನಿಲ್ದಾಣಗಳಾಗಿವೆ. ಇಂತಹ ಜಾಗದಲ್ಲಿ ಹೇಗೆ ವಾಸ ಮಾಡುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳು ಕಂಡುಬಂದರೂ ಆರೋಗ್ಯ ಇಲಾಖೆ ಫಾಗಿಂಗ್ ಮಾಡಿಲ್ಲ. ಸ್ವಚ್ಛತೆಯ ಹಾಗೂ ರೋಗದ ಕುರಿತು ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಜಾಗೃತಿ ಮೂಡಿಸಿಲ್ಲ ಎಂದು ನಿವಾಸಿಗಳು ದೂರಿದರು. ಅಧಿಕಾರಿಗಳ ಬೇಜವಾಬ್ದಾರಿ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೆ 20 ಡೆಂಗ್ಯೂ, 5 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಆರಂಭದಲ್ಲಿಯೇ ಈ ಸ್ಥಿತಿ ಇದ್ದರೆ ಮುಂದೆ ಹೇಗೆ ಎಂಬ ಪ್ರಶ್ನೆಯಿದೆ.