ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಮಂಗಳವಾರ (ಡಿ.28) ತಡರಾತ್ರಿ ಕಳ್ಳರ ಗ್ಯಾಂಗ್ ಮೂರಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಪಟೇಲ್ ವಾಡಿ ಹಾಗೂ ಉಪ್ಪಾರವಾಡಿಯಲ್ಲಿ ಮನೆಗಳ್ಳತನವಾಗಿದೆ ಎನ್ನಲಾಗ್ತಿದೆ. ಪಟೇಲ ವಾಡಿಯ ಶಂಕರ ಆಚಾರ್ಯ ಎಂಬವರ ಮನೆಯಲ್ಲಿ 1 ತೊಲೆ ಬಂಗಾರ ಹಾಗೂ 10 ಸಾವಿರ ನಗದು, ಶರಣು ಮೂರ್ತಿ ಕುಲಕರ್ಣಿ ಮನೆಯಲ್ಲಿ 15 ತೊಲೆ ಬೆಳ್ಳಿ, 8 ಗ್ರಾಂ ಬಂಗಾರ ಹಾಗೂ 3 ಸಾವಿರ ರೂ. ಕಳ್ಳತನವಾಗಿದೆ.
ಉಪ್ಪಾರವಾಡಿಯ ಹನುಮಂತಮ್ಮ ಎಂಬವರ ಮನೆಯಲ್ಲಿ 12 ತೊಲೆ ಬಂಗಾರ, 15 ಸಾವಿರ ರೂ, ಹನುಮಂತಪ್ಪ ನಿವಾಸದಲ್ಲಿ ಅರ್ಧ ತೊಲೆ ಬಂಗಾರ, 7 ಸಾವಿರ ನಗದು, ಹಾಗೂ ಪಟೇಲ್ ವಾರ್ಡಿಯ ವಾಜಪ್ಪ ಆಚಾರ್ಯ ಅವರ ಮನೆ ಬಾಗಿಲು ಮುರಿದು ಖದೀಮರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದಾಗ ಮನೆಯ ಮಾಲೀಕರು ಮನೆಯಲ್ಲಿ ಇರಲಿಲ್ಲ. ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಂಧನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯ ಎಸಗಲು ಬಡಾವಣೆಯಲ್ಲಿ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯಿಂದ ಬಡಾವಣೆಯ ಜನರಲ್ಲಿ ಆತಂಕ ಮೂಡಿದ್ದು, ಕಳ್ಳರನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಅಂಗಡಿ ಮಾಲೀಕರಿಗೆ ವಂಚನೆ: 3 ವರ್ಷಗಳ ಬಳಿಕ ಆರೋಪಿ ಅರೆಸ್ಟ್