ರಾಯಚೂರು : ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿರುವ ಹಿನ್ನೆಲೆ ರೈತರು ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಸಾಗಿಸಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಲ್ಲಿ ಸಾಕಷ್ಟು ರೈತರ ಜಮೀನಿನಲ್ಲಿ ಬೆಳೆದಿರುವ ಪಪ್ಪಾಯ ಕಟಾವಿಗೆ ಬಂದಿದೆ. ಆದರೆ, ಹಣ್ಣನ್ನು ಮಾರಲು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದ ಕಾರಣ ರೈತರು ಹಣ್ಣನ್ನು ಕಟಾವು ಮಾಡಿ ತಿಪ್ಪೆಗುಂಡಿಗೆ ಹಾಕಿ ಕಣ್ಣೀರು ಸುರಿಸುತ್ತಿದ್ದಾರೆ.
ಅತಿವೃಷ್ಟಿ, ಅನಾವೃಷ್ಟಿಯಿಂದ ಪ್ರತಿ ವರ್ಷ ಸಂಕಷ್ಟಕ್ಕೆ ಸಿಲುಕುತಿದ್ದ ರೈತರು ಈ ಬಾರಿ ಕೊರೊನಾ ಎಂಬ ಮಹಾಮಾರಿ ಕರಿನೆರಳಿಗೆ ಸಿಲುಕಿ ನರಳುವಂತಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿದ್ದ ಬೆಳೆ ಕೈಗೆಟುಕದೇ ಹಾಳಾಗುತ್ತಿರುವ ರೈತರ ನೆರವಿಗೆ ಸರ್ಕಾರ ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಷ್ಟೇ..