ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಅರ್ಹ ಫಲಾನುಭವಿಗಳು ವಿಧಿ 371(ಜೆ) ಪ್ರಕಾರ ಅರ್ಹತಾ ಪ್ರಮಾಣ ಪತ್ರ ಒಮ್ಮೆ ಪಡೆದಿದ್ದಲ್ಲಿ ಮತ್ತೊಮ್ಮೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ರಾಯಚೂರು ಉಪ ವಿಭಾಗಾಧಿಕಾರಿ ಕಚೇರಿಯಿಂದ 371(ಜೆ) ಅರ್ಹತಾ ಪ್ರಮಾಣ ಪತ್ರ ಕೈಬರಹದಲ್ಲಿ ಪಡೆದಿದ್ರಷ್ಟೇ ಅಂತಹ ಅಭ್ಯರ್ಥಿಗಳು ಮಾತ್ರ ಆನ್ಲೈನ್ ಮೂಲಕ ಮತ್ತೊಮ್ಮೆ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಪ್ರತಿ ಹೊಸ ನೇಮಕಾತಿ ಅಧಿಸೂಚನೆಗಳಿಗೆ ಮತ್ತು ವಿವಿಧ ಉದ್ಯೋಗ, ಪದೋನ್ನತಿ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರತಿ ಸಲ, ಪ್ರತಿ ವರ್ಷ ಹೊಸ ಗಣಕೀಕೃತ ಅರ್ಹತಾ ಪ್ರಮಾಣ ಪತ್ರ ಪದೇಪದೆ ಪಡೆಯುವ ಅವಶ್ಯಕತೆ ಇರಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಹೆಸರಿಸಿದ ನಂತರ ಬಹುತೇಕ ಅಭ್ಯರ್ಥಿಗಳು ತಮ್ಮಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರಮಾಣ ಪತ್ರ 371(ಜೆ) ಅರ್ಹತಾ ಪ್ರಮಾಣ ಪತ್ರ ಲಭ್ಯವಿದ್ದಾಗ್ಯೂ, ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ ನೀಡಬೇಕೆಂದು ಈ ಕಚೇರಿಗೆ ವಿಚಾರಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ.
ಪರಿಷ್ಕೃತ ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ ನೀಡಲು ಸರ್ಕಾರದಿಂದ ಯಾವುದೇ ಆದೇಶ ಇರುವುದಿಲ್ಲ. ಕಾರಣ ತಮ್ಮಲ್ಲಿ ಲಭ್ಯವಿರುವ ಗಣಕೀಕೃತ 371 (ಜೆ) ಅರ್ಹತಾ ಪ್ರಮಾಣ ಪತ್ರವನ್ನು ಹೊಸದಾಗಿ ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರವೆಂದು ಪಡೆಯುವ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.