ರಾಯಚೂರು: ಜಿಲ್ಲೆಯ ಹಿಂಗಾರು ಸಮಯದಲ್ಲಿ ಬೆಳೆದ ತೊಗರಿಯನ್ನ ಮಾರಾಟ ಮಾಡಲು ಸರ್ಕಾರದಿಂದ ಜಿಲ್ಲೆಯಾದ್ಯಂತ 24 ತೊಗರಿ ಖರೀದಿ ಕೇಂದ್ರಗಳನ್ನ ತೆರೆಯಲಾಗಿತ್ತು. 11360 ನೋಂದಾಯಿತ ರೈತರು ಏಪ್ರಿಲ್ 10ರವರೆಗೆ ಮಾರಾಟಕ್ಕೆ ಅರ್ಹತೆ ಪಡೆದುಕೊಂಡಿದ್ದರು.
ಆದರೆ ಸರ್ಕಾರ ಇನ್ನೂ ಸುಮಾರು ಮೂರೂವರೆ ಕೋಟಿ ರೂಪಾಯಿ ಮೊತ್ತದ 1000ಕ್ಕೂ ಕ್ವಿಂಟಾಲ್ ತೊಗರಿ ಮಾರಾಟ ಮಾಡಿದ ರೈತರಿಗೆ ತೊಗರಿ ಹಣ ಪಾವತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದಾಗಿ ರೈತರು ತೊಂದ್ರೆ ಅನುಭವಿಸುವಂತಾಗಿದ್ದು, ಅದಷ್ಟು ಬೇಗ ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಾನ್ಯತೆ ಹೊಂದಿದ್ದ ನಾಫೇಡ್ ಸಂಸ್ಥೆ, ರಾಜ್ಯ ಮಾರ್ಕೆಟಿಂಗ್ ಫೆಡರೇಶನ್ ಸಹಯೋಗದಲ್ಲಿ ಜಿಲ್ಲೆಯಲ್ಲಿ 24 ಖರೀದಿ ಕೇಂದ್ರಗಳನ್ನು ತೆರೆದಿತ್ತು. ತೊಗರಿ ಮಾರಾಟದ ಸಂದರ್ಭದಲ್ಲಿ ರೈತರು ರಾಜ್ಯ ಮಾರ್ಕೆಟಿಂಗ್ ಫೆಡರೇಶನ್ಗೆ ಪಹಣಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನೂ ಸಲ್ಲಿಸಿದ್ದರು. ಆದರೆ, ಇದೀಗ ಅದೇ ದಾಖಲೆಗಳಲ್ಲಿನ ಕೆಲವೊಂದು ತಾಂತ್ರಿಕ ತೊಂದರೆ ಎದುರಾಗಿದೆಯಂತೆ. ಇದರ ಪರಿಣಾಮ ತೊಗರಿ ಮಾರಾಟ ಮಾಡಿದ ರೈತರಿಗೆ ಪಾವತಿಯಾಗಬೇಕಾದ ಹಣ ಪಾವತಿಯಾಗದೆ ಇಲಾಖೆ ಖಾತೆಯಲ್ಲಿ ಜಮಾವಿದೆ.
ಆದ್ರೆ ಇತ್ತ ತಮ್ಮ ಖಾತೆಗೆ ಹಣ ಬಂದಿಲ್ಲವೆಂದು ರೈತರು ನಿತ್ಯ ಖರೀದಿ ಮಾಡಿದ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಹಣ ಬರದಿರುವ ಮಾಹಿತಿ ಪಡೆದುಕೊಂಡು ಇಲಾಖೆಯ ಅಧಿಕಾರಿಗಳು ಸಹ ಆಗಿರುವ ತಾಂತ್ರಿಕ ಸಮಸ್ಯೆಯನ್ನ ಬಗೆಹರಿಸುವ ಮೂಲಕ ಹಣವನ್ನ ಪಾವತಿ ಮಾಡುತ್ತಿದ್ದಾರೆ. ರೈತರು ನೀಡಿರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸ ಬಂದ್ರೆ ಹಣ ಪಾವತಿಯಾಗುವುದಿಲ್ಲ. ಹೀಗಾಗಿ ಸಂಬಂಧಿಸಿದ ರೈತರಿಂದ ಸಮರ್ಪಕವಾದ ದಾಖಲೆಗಳನ್ನ ಪಡೆದುಕೊಂಡು ಹಣವನ್ನ ಪಾವತಿಸುವ ಕಾರ್ಯ ನಡೆದಿದೆ ಅಂತಾ ಕೆಎಸ್ಸಿಎಂಎಫ್ ನೋಡೆಲ್ ಅಧಿಕಾರಿ ಭಗವಂತ ಹೇಳಿದ್ದಾರೆ.
ಹಿಂಗಾರಿಗೆ ತೊಗರಿ ಬೆಳೆಗೆ ಮುಂಗಾರು ಬಂದರೂ ಇನ್ನೂ ನೂರಾರು ರೈತರಿಗೆ ಸರ್ಕಾರದಿಂದ ಹಣ ಪಾವತಿಯಾಗಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಮುಂಗಾರು ಬಿತ್ತನೆಗೆ ರೈತರಿಗೆ ಹಣದ ಅವಶ್ಯಕತೆ ಇದೆ. ಆದಷ್ಟು ಬೇಗನೆ ತೊಗರಿ ಹಣ ಪಾವತಿಸುವಂತೆ ರೈತರು ಒತ್ತಾಯಿಸಿದ್ದಾರೆ.